ಲಕ್ಷ್ಮೇಶ್ವರ: ರಾಜ್ಯದಲ್ಲಿ ಸರ್ಕಾರ ಭೂಸುಧಾರಣೆ ಕಾಯ್ದೆ ಮೂಲಕ ರೈತರಿಗೆ ಮಾರಕವಾದ ಕಾಯ್ದೆ ಜಾರಿಗೆ ತಂದಿದೆ. ಜೊತೆಗೆ ಸ್ಥಳೀಯವಾಗಿಯೂ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ನೀವು ಸರಿಯಾಗಿ ಸ್ಪಂದಿಸುತ್ತಿಲ್ಲ. ಶಾಸಕರು ಹೇಳಿದಂತೆ ಮಾತ್ರ ಕೇಳಬೇಡಿ ರೈತರ ಸಂಕಷ್ಟಗಳನ್ನು ಕಣ್ತೆರೆದು ನೋಡಿ ಎಂದು ತಹಶೀಲ್ದಾರರನ್ನು ರೈತರು ತರಾಟೆಗೆ ತೆಗೆದುಕೊಂಡ ಘಟನೆ ಲಕ್ಷ್ಮೇಶ್ವರದಲ್ಲಿ ನಡೆಯಿತು.
ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ಬಂದ್ ಹಿನ್ನೆಲೆ ರೈತಪರ ಸಂಘಟನೆಗಳ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಲಕ್ಷ್ಮೇಶ್ವರ ತಹಶೀಲ್ದಾರ್ ಬ್ರಮರಾಂಭ ಗುಬ್ಬಿಶೆಟ್ಟಿ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನೆ ಹಿನ್ನೆಲೆ ಪಕ್ಷಾತೀತ ರೈತ ಹೋರಾಟ ವೇದಿಕೆಯ ವತಿಯಿಂದ ತಹಶಿಲ್ದಾರರಗೆ ಮನವಿ ಕೋಡುವ ವೇಳೆ ಸ್ಥಳೀಯ ಸಮಸ್ಯೆಗಳನ್ನು ತಹಶೀಲ್ದಾರರ ಗಮನಕ್ಕೆ ತಂದರು. ಈ ವೇಳೆ ವೇದಿಕೆ ಅಧ್ಯಕ್ಷ ಮಹೇಶ ಹೋಗೆಸೊಪ್ಪಿನ್, ಈಗಾಗಲೇ ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತಂದಾಗ್ಯೂ ನೀವು ರೈತರ ಯಾವುದೇ ಸಮಸ್ಯೆಗೆ ಸ್ಪಂದಿಸಿಲ್ಲ, ದಯವಿಟ್ಟು ರೈತರ ಬಗ್ಗೆ ನಿಷ್ಕಾಳಜಿ ತೋರಬೇಡಿ ನಿಮ್ಮ ಕೈ-ಕಾಲು ಮುಗಿದು ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಲಕ್ಷ್ಮೇಶ್ವರ ಪಟ್ಟಣದ ಸುತ್ತಮುತ್ತಲಿನ ರೈತರ ಕಷ್ಟಗಳಿಗೆ ನೀವು ಸ್ಪಂದಿಸುತ್ತಿಲ್ಲ. ಸಾವಿರಾರು ರೈತರು ಮನವಿ ಕೊಟ್ಟರೂ ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.