ಬೆಂಗಳೂರು : ವಿಪಕ್ಷಗಳ ವಿರೋಧದ ನಡುವೆಯೂ ವಿವಾದಿತ 2020ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ)(ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕಾರಗೊಳಿಸಲಾಯಿತು.
ಭೋಜನ ವಿರಾಮದ ನಂತರ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು, ಮಂಡಿಸಿದ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಪಿಎಂಸಿ, ಕೃಷಿ ವಿಚಾರಗಳು ರಾಜ್ಯದ ಲಿಸ್ಟ್ ಗೆ ಸೇರುತ್ತದೆ. ಇದು ರೈತರ ಒತ್ತಾಯದಿಂದ ಮಾಡಿದ ತಿದ್ದುಪಡಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಚೇರಿಯಿಂದ ಬಂದ ಪತ್ರದ ಆಧಾರದ ಮೇಲೆ ಈ ತಿದ್ದುಪಡಿ ತರಲಾಗಿದೆ. ಇದರಿಂದ ರೈತರಿಗೆ ನಷ್ಟವಾಗಲಿದೆ. ಇದು ರೈತ ಸ್ನೇಹಿ ಅಲ್ಲ ಎಂದು ಗುಡಿಗಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಈ ವಿಧೇಯಕಕ್ಕೆ ಒಪ್ಪಿಗೆ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಆದರೆ, ಧ್ವನಿ ಮತದ ಮೇಲೆ ಬಿಜೆಪಿ ಈ ವಿಧೇಯಕವನ್ನು ಅಂಗೀಕಾರಗೊಳಿಸಿತು.