ಬೆಂಗಳೂರು: ಸಿದ್ದರಾಮಯ್ಯ ಊಸುರವಳ್ಳಿ ಇದ್ದಂತೆ. ಅಧಿಕಾರದ ಲಾಲಸೆಯಿಂದಲೇ ಅವರು ಕಾಂಗ್ರೆಸ್ ಗೆ ಜಿಗಿದಿದ್ದಾರೆ. ಜೆಡಿಎಸ್ ಅವಕಾಶವಾದಿ ಪಕ್ಷ ಎಂದು ಹೇಳುವ ಮೂಲಕ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲಾಗಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಕ್ಕಾಗಿ ಜೆಡಿಎಸ್ ನವರು ಆರೆಸ್ಸೆಸ್ ಸೇರಲು ನಾಚುವುದಿಲ್ಲ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ತನುವಿನೊಳು ಕಪಟ, ಮನದೊಳು ಮರ್ಕಟ, ಆಚಾರ ಲಿಂಗವ ಭಂಗಗೊಳಿಸಿ ಸಂಗ ಕೇಳಿಯ ಮನದ ಮುಂದಣ ಆಸೆಯ ಮತಿಗೇಡಿ ನೀನು ಶರಣನೆಂದು ಕೊಂಡೊಡೆ ಲಿಂಗ – ಜಂಗಮ ಕೂಡಲ ಸಂಗನು ಮುನಿದು ತಲೆ ಹೋಳಾದೀತು ಎಂಬ ವಚನದ ಸಾಲನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರದ ಆಸೆಯಿಂದ ಸಿದ್ದರಾಮಯ್ಯ ಅವರು ಅನ್ಯ ಪಕ್ಷಕ್ಕೆ ಹೋಗಿ, ಅಲ್ಲಿ ಬಿತ್ತಿದ ಹಾಗೂ ತೆಗೆದ ಕಳೆ ಏನು ಎಂಬುವುದಕ್ಕೆ ಉತ್ತರ ಸಿಕ್ಕಿದೆ. ಅವರನ್ನು ಆಲಂಗಿಸಿಕೊಂಡ ಪಕ್ಷವೇ ಸದ್ಯ ಎಲ್ಲವನ್ನೂ ಅನುಭವಿಸುತ್ತಿದೆ. ಬೆಳೆದ ಪಕ್ಷಕ್ಕೆ ಮಗ್ಗುಲಲ್ಲಿ ಇದ್ದು ಚಾಕು ಹಾಕಿದವರ ಮಾರ್ಜಾಲ ಉಪದೇಶ ಯಾರಿಗೆ ಸಹ್ಯವಾದೀತು? ಎಂದು ಕಿಡಿಕಾರಿದ್ದಾರೆ.