ಬೆಂಗಳೂರು: ಜಗ್ಗೇಶ್ ವಿರುದ್ಧ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಸಂದೀಪ್ ಅಣಬೇರು ಸೈಬರ್ ಕ್ರೈಂ ಕೇಂದ್ರದಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ತಿರುಚಿದ ಫೋಟೋಗಳನ್ನು ಜಗ್ಗೇಶ್ ಮತ್ತು ಬಿಜೆಪಿಗರು ಪೋಸ್ಟ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಹೊರಟ ನಾಗರಿಕರು ಬಿಜೆಪಿಗೆ ಹಿಡಿಶಾಪ ಹಾಕಿದ ದೃಶ್ಯ ಕಂಡುಬಂದಿತ್ತು. ಈ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಕೂಡ ಆಗಿತ್ತು. ಈ ವಿಡಿಯೋದಲ್ಲಿದ್ದ ವ್ಯಕ್ತಿ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಎಂದು ಬಿಜೆಪಿ ಬೆಂಬಲಿಗರು ಫೋಟೋವನ್ನು ಹಂಚಿಕೊಂಡಿದ್ದರು.
ಚಿತ್ರನಟ, ಮಾಜಿ ಕಾಂಗ್ರೆಸ್ಸಿಗ, ಮಾಜಿ ಶಾಸಕ, ಸದ್ಯಕ್ಕೆ ಬಿಜೆಪಿಯಲ್ಲಿರುವ ಜಗ್ಗೇಶ್ ಕೂಡ ಈ ಫೋಟೋವನ್ನು ಟ್ವೀಟ್ ಮಾಡಿ, “ಮೊನ್ನೆ ಊರು ಬಿಟ್ಟು ಹೋಗುವವನು ನನಗೆ ಪಟ್ಟಣ ಹಾಗು ಭಾಜಪ ಸರ್ಕಾರ ಸಹವಾಸ ಸಾಕು ಊರಿಗೆ ಹೋಗಿ ಜಮೀನಿನಲ್ಲಿ ಜೀವನಮಾಡುವೆ ಎಂದು ಬಿಟ್ಟ! ಅದು viral ಆಯಿತು! ಈಗ ನೋಡಿದರೆ ಈತ well planed! ಅನ್ಯ ಪಕ್ಷದ ಕಾರ್ಯಕರ್ತ! ಆದರು ಸಹೋದರ ಎಷ್ಟೆ ಯತ್ನಿಸಿದರು @narendramodi @BJP4India @BJP4Karnataka ಜನರ ಮನಸ್ಸಲ್ಲಿ ಜಾಗಪಡೆದಿದೆ! ಜೈಹಿಂದ್!” ಎಂದು ಟ್ವೀಟ್ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಂದೀಪ್ ಜಗ್ಗೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಜೊತೆಗೆ ತಕ್ಷಣ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದೂರು ದಾಖಲಿಸುತ್ತೇವೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲ ಕೂಡ ಇದೆ ಎಂದು ಅವರು ಹೇಳಿದರು.