ಗದಗ: ಇದು ಒಂದು ಸೀಲ್ ಡೌನ್ ಕಥೆಯಲ್ಲ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನಲ್ಲಿ ಪಾಸಿಟಿವ್ ಪತ್ತೆಯಾದ ನಂತರ ಪ್ರದೇಶವನ್ನು ಸೀಲ್ ಡೌನ್ ಮಾಡಿ ಎಂಟು ದಿನ ಕಳೆದವು. ಅಗತ್ಯ ವಸ್ತು ಪೂರೈಸಬೇಕಾದ ಜಿಲ್ಲಾ ಮತ್ತು ತಾಲೂಕಾಡಳಿತಗಳು ಈ ಊರಿನ ಕಡೆ ತಲೆ ಹಾಕುತ್ತಿಲ್ಲ. ಎಂಎಲ್ಎ ರಾಮಣ್ಣ ಲಮಾಣಿ ಕೂಡ ಈ ಕಡೆ ಸುಳಿದಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ.
ಎಂಎಲ್ಎ ರಾಮಣ್ಣ ಲಮಾಣಿಯವರಿಗೆ ಫೋನ್ ಮಾಡಿದ್ರ ಅಧಿಕಾರಿಗಳನ್ನ ಕಳಿಸ್ತೀನಿ ಅಂದ್ರು. ಯಾರದೂ ಸುಳಿವ ಇಲ್ಲ. ಪಿಡಿಒಗೆ ಫೋನ್ ಮಾಡಿದ್ರ ಆರಾಮಿಲ್ಲ ಅಂತ ಹೇಳ್ತಾರ. 8 ದಿನದಿಂದ ಸಾಯಾಕ ಹತ್ತಿವಿ. ಈಗರ ಸರಕಾರ ನಮ್ಮನ್ನ ನೋಡಲಿ’ ಎಂದು ಯುವಕನೊಬ್ಬ ತನ್ನ ಅಳಲು ತೋಡಿಕೊಂಡ.
ಸೀಲ್ ಡೌನ್ ಆದ ಪ್ರದೇಶ ನಿಯಂತ್ರಿತ ಪ್ರದೇಶವಾಗುವುದರಿಂದ ಅಲ್ಲಿನ ಎಲ್ಲ ಅಂಗಡಿಗಳನ್ನು ಬಂದ್ ಮಾಡುವ ಸರಕಾರ ಅಗತ್ಯ ವಸ್ತುಗಳನ್ನು ಪೂರೈಸಬೇಕು. ಅದು ಅದರ ಕರ್ತವ್ಯವೂ ಕೂಡ ಹೌದು. ನಿಯಂತ್ರಿತ ಪ್ರದೇಶಗಳಲ್ಲಿ ಕಾಟಾಚಾರಕ್ಕೆ ಒಂದೆರಡು ದಿನ ಆಹಾರ ದಿನಸಿ ಪೂರೈಸಿ ಕೈ ತೊಳೆದುಕೊಳ್ಳಲಾಗುತ್ತಿದೆ.
ಬಾಲೆಹೊಸೂರಿನ ಜನಕ್ಕೆ ಆಹಾರವಿರಲಿ ಕುಡಿಯುವ ನೀರಿನ ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ. ಕೆಲವರಿಗೆ ಎರಡು ಹೊತ್ತು ಊಟ ಮಾಡುವುದೂ ಕಷ್ಟವಾಗಿದೆ.
ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ಇಡೀ ಏರಿಯಾದ ಜನರು ಪಡುತ್ತಿರುವ ಪಡಿಪಾಲನ್ನು ಕೇಳುವವರಿಲ್ಲ. ಅಲ್ಲಿನ ವೃದ್ಧೆಯೊಬ್ಬರಂತೂ ‘ದೊಡ್ಡವರಿಗೆ ಹಿಡಿಶಾಪ ಹಾಕಿದ್ದಾರೆ. ‘ಎಲ್ಲ ಅಂಗಡಿ ಬಂದ್ ಮಾಡಿಸಿದ ಮ್ಯಾಲ ಇಲ್ಲಿ ಅಡುಗಿ ಮಾಡಾಕ್ ಒಳ್ಳೆ ಎಣ್ಣಿ, ಉಳ್ಳಾಗಡ್ಡಿ ಸೈತಿಲ್ಲ. ಹೊರಗ ನಿಲ್ಲಾಕು ಬಿಡಲ್ಲ. ಮನ್ಯಾಗ ಸಣ್ ಸಣ್ ಮಕ್ಳು ಮರಿ ಅದಾವ. ಹಾಲೂ ಇಲ್ಲ, ಕೂಳೂ ಇಲ್ಲ. ದೊಡ್ಡವರು ಅನಿಸಿಕೊಂಡವರು ಒಬ್ಬರೂ ಬಂದಿಲ್ಲ’ ಎಂದು ಹಿಡಿಶಾಪ ಹಾಕಿದರು.
ಕೃಷಿ ಕೆಲಸ ಮಾಡುವ ಯುವಕರಂತೂ ಕಂಗೆಟ್ಟಿದ್ದಾರೆ. ‘ಅವತ್ತಿನ ಕೂಲಿ ತಂದರ ಇಲ್ಲಿ ಹೊಟ್ಟಿ ತುಂಬಾದು. ಎಲ್ಲ ಕೊಡ್ತೀನಿ ಅಂತ ಹೇಳಿದ ಅಧಿಕಾರಿಗಳು ಬಂದೇ ಇಲ್ಲ.