ಗದಗ: ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸುಂದರೇಶಬಾಬು ಎಂ ಅವರನ್ನು ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿರುವ ಎಂ.ಜಿ. ಹಿರೇಮಠ ಪುಷ್ಪ ಗುಚ್ಛ ನೀಡಿ ಸ್ವಾಗತಿಸಿದರು.
ಸುಂದರೇಶ್ ಬಾಬು ಅವರು ಅಲಗಪ್ಪ ವಿವಿಯಲ್ಲಿ
ಬ್ಯಾಂಕಿಂಗ್ ವಿಭಾಗದಲ್ಲಿ MBA ಪದವಿ ಪಡೆದಿದ್ದಾರೆ. ಕೃಷಿಯಲ್ಲಿ ಬಹಳಷ್ಟು ಆಸಕ್ತಿ ಹೊಂದಿದವರು. ಹೀಗಾಗಿ ತಮಿಳುನಾಡಿನ ಮದುರೈ ವಿವಿಯಲ್ಲಿ ಕೃಷಿ ವಿಷಯದಲ್ಲಿ ಬಿಎಸ್ಸಿ ಪದವಿ ಪಡೆದುಕೊಂಡಿದ್ದಾರೆ. ತಮಿಳುನಾಡಿನ ಬೋಡಿನಾಯಕನೂರಿನಲ್ಲಿ 23-12-1986 ಜನಿಸಿದ
ಇವರು, 2008 ರಲ್ಲಿ ಕೆನರಾ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಒಂದು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ನಂತರ 2011-12 ನೇ ಸಾಲಿನಲ್ಲಿ ಐಎಎಸ್ ಪರೀಕ್ಷೆ ತೇರ್ಗಡೆ ಹೊಂದಿದರು.
ಇವರ ತಂದೇ ಮುರಗೇಸನ್ ನಿವೃತ್ತ ಎಲ್.ಐ.ಸಿ ಉದ್ಯೋಗಿ, ತಾಯಿ ಜಯಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ. ಒಬ್ಬ ಸಹೋದರ ಸಾಫ್ಟವೇರ್ ಕಂಪನಿಯಲ್ಲಿ ಇಂಜನೀಯರ್. ಇನ್ನೊಬ್ಬ ಸಹೋದರ ಐಎಫ್ಎಸ್ ಅಧಿಕಾರಿ. ಬ್ಯಾಂಕ್ ಉದ್ಯೋಗಿಯಾಗಿದ್ದ ಸುಂದರೇಶ ಬಾಬು ಅವರಿಗೂ ಐಎಫ್ಎಸ್ ಅಧಿಕಾರಿಯಾಗಿದ್ದ ಅವರ ಸಹೋದರ ಆನಂದ್ ಪ್ರೇರಣೆಯಾಗಿದ್ದಾರೆ ಎಂದು ಸ್ವತ: ಅವರ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ತಮಿಳುನಾಡು ರಾಜ್ಯಕ್ಕೆ 2ನೇ ರ್ಯಾಂಕ್ ಪಡೆಯುವ ಜೊತೆಗೆ ದೇಶಕ್ಕೆ 38 ನೇ ರ್ಯಾಂಕ್ ಪಡೆದು ಐಎಎಸ್ ತೇರ್ಗಡೆ ಹೊಂದಿದ್ದಾರೆ. ನಂತರ ರಾಜ್ಯದಲ್ಲಿ ವಿಜಯಪುರ ಜಿಪಂ ಸಿಇಓ ಆಗಿ ಹಾಗೂ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ. ಸದ್ಯ 34 ವರ್ಷದ ಸುಂದರೇಶಬಾಬು ಗದಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದಿದ್ದಾರೆ.