ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!!
ಬೆಂಗಳೂರು : ಕೊರೊನಾ ಲಾಕ್ ಡೌನ್ ನ್ನು ಸಡಿಲಿಸಲಾಗಿದೆ. ನಿನ್ನೆಯಿಂದಲೇ ಸಡಿಲಿಕೆಯಾಗಿದ್ದು, ಜನರು ಮಾತ್ರ ಭಯವಿಲ್ಲದೆ ಓಡಾಡುತ್ತಿದ್ದಾರೆ. ಹೀಗಾದರೆ ಮುಂದಿನ ದಿನಗಳು ಸಾಕಷ್ಟು ಕಠಿಣವಾಗಿರಲಿದ್ದು, ಜನರು ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಅರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಮಾತನಾಡಿ, ಮುಂದಿನ ದಿನಗಳು ನಮಗೆ ಪರೀಕ್ಷೆಯ ದಿನಗಳಾಗಿರಲಿದ್ದು, ಈ ದಿನಗಳಲ್ಲಿ ದಾಖಲಾಗುವ ಸೋಂಕಿತರ ಸಂಖ್ಯೆ ಹೋರಾಟದ ಫಲಿತಾಂಶ ನಿರ್ಧರಿಸಲಿವೆ. ಈಗಾಗಲೇ ಇಲಾಖೆ ಸಾಧ್ಯವಾದಷ್ಟು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ ಎಂದಿದ್ದಾರೆ.
ಅಧಿಕಾರಿಗಳು ಸಮುದಾಯ ಹರಡುವಿಕೆಯನ್ನು ತಡೆಯಲು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಸಾರ್ವಜನಿಕರು ಸ್ವಚ್ಛತೆ ಹಾಗೂ ಸ್ವಶಿಸ್ತು ಕಾಪಾಡಿಕೊಂಡು ಆರೋಗ್ಯದ ನಿಯಮ ಪಾಲಿಸಬೇಕು. ಇಲ್ಲವಾದರೆ, ಅಪಾಯ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.
ಜನರು ಸರ್ಕಾರದ ಆದೇಶಗಳನ್ನು ಪಾಲನೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ, ಮಾಸ್ಕ್’ಗಳು ಧರಿಸುವುದರಿಂದ, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಾಗೂ ಸ್ಯಾನಿಟೈಸರ್ ಗಳನ್ನು ಬಳಕೆ ಮಾಡುವುದರಿಂದ ಕೊರೊನಾ ಅಟ್ಟಬಹುದು ಎಂದು ಹೇಳಿದ್ದಾರೆ.