ಮುಂಡರಗಿ: ಈಗಾಗಲೇ ವರ್ಷ ಪೂರ್ತಿ ಓದಿ ಪರೀಕ್ಷೆಗಾಗಿ ಕಾದಿದ್ದ ಆ ವಿದ್ಯಾರ್ಥಿ ಪರೀಕ್ಷೆ ಮುಗಿಸುವ ಮುನ್ನವೇ ತನ್ನ ಬದುಕಿನ ಪರೀಕ್ಷೆ ಮುಗಿಸಿ ಫಲಿತಾಂಶ ಪಡೆದುಕೊಂಡು ಹೋಗಿದ್ದಾನೆ. ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಯ ಮೇಲೆ ಜವರಾಯನ ಅಟ್ಟಹಾಸ ಮೆರೆದಿದ್ದಾನೆ. ಲಾರಿ ಮೂಲಕ ಬಂದ ಜವರಾಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯನ್ನೆ ಬಲಿ ಪಡೆದಿದ್ದಾನೆ. ಮದ್ಯಾಹ್ನವಷ್ಟೆ ಪರೀಕ್ಷೆ ಮುಗಿಸಿ ಮನೆಗೆ ಮರಳುವ ವೇಳೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಎಸ್.ಎಸ್.ಎಲ್ಸಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಮೂವರ ಸ್ಥಿತಿ ಗಂಭೀರವಾಗಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ಓರ್ವ ವಿದ್ಯಾರ್ಥಿ ಸಿದ್ದಪ್ಪ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಉಳಿದಿಬ್ಬರನ್ನು ಜಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.