ದೆಹಲಿ: ಚೀನಾ ಮತ್ತು ಭಾರತೀಯ ಯೋಧರ ನಡುವಿನ ಮುಖಾಮುಖಿಯಲ್ಲಿ ಲಡಾಖ್ ನ ಗಾಲ್ವಾನ್ ನಲ್ಲಿ ಒಬ್ಬ ಭಾರತೀಯ ಸೇನಾಧಿಕಾರಿ ಮತ್ತು ಇಬ್ಬರು ಸೈನಿಕರು ಬಲಿಯಾಗಿದ್ದಾರೆ. ಈ ವಿಷಯವನ್ನು ಭಾರತೀಯ ಸೇನಾಪಡೆಯ ಅಧಿಕಾರಿಗಳು ಹೇಳಿದ್ದು, ಚೀನಾದ ನಾಲ್ವರು ಯೋಧರು ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಚೀನಾ-ಭಾರತದ ಲಡಾಖ್ ಗಡಿಯಲ್ಲಿ ಕಳೆದ ಒಂದು ವಾರದಿಂದ ಭಾರತೀಯ ಸೇನೆ ಮತ್ತು ಚೀನಾ ಸೇನೆ ಮುಖಾಮುಖಿಯಾಗುತ್ತಿದ್ದ ವರದಿಗಳು ಬರುತ್ತಿದ್ದವು. ಇಂದು ಇದು ಅತಿರೇಕಕ್ಕೆ ತಿರುಗಿದ್ದು, ಎರಡೂ ರಾಷ್ಟ್ರಗಳು ಗಡಿಯಲ್ಲಿ ನಿಯೋಜಿಸಿದ್ದ ಸೇನೆಗಳನ್ನು ಗಡಿಯಿಂದ ವಾಪಸ್ ಕರೆಸಿಕೊಳ್ಳುವ ಸಮಯದಲ್ಲಿ ಈ ಅಚಾತುರ್ಯ ನಡೆದಿದೆ.
ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮನೆಗೆ ಮೂರೂ ಸೇನೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಆಗಮಿಸಿ ಚರ್ಚಿಸಿದರು. ಜೊತೆಗೆ, ರಕ್ಷಣಾ ಸಚಿವರ ನಿವಾಸದಲ್ಲಿ ಹೈ ಲೆವೆಲ್ ಮೀಟಿಂಗ್ ನಡೆಸಲಾಯಿತು. ಗಾಲ್ವಾನ್ ಕಣಿವೆಯಲ್ಲಿ ಭಾರತ ಚೀನಾ ಯೋಧರ ಕಾಳಗ ವಿಷಯದ ಸಂಬಂಧ ಸೇನಾ ಮುಖ್ಯಸ್ಥರ ಜೊತೆ ರಾಜನಾಥ್ ಸಿಂಗ್ ಚರ್ಚಿಸಿದರು. ಗಡಿಯಲ್ಲಿ ಪರಿಸ್ಥಿತಿ ಕುರಿತು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಮಾಹಿತಿ ನೀಡಿದರು.
ಈ ಕುರಿತು ಟ್ವೀಟರ್ ಮೂಲಕ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಗಾಲ್ವಾನ್ ಕಣಿವೆಯಿಂದ ಬರುವ ವರದಿಗಳು ಗೊಂದಲಮಯವಾಗಿವೆ. ಉಲ್ಬಣಿಸುವ ಬಿಕ್ಕಟ್ಟಿನಿಂದ ನಮ್ಮ ಸೈನಿಕರು ಯಾಕೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ರಾಷ್ಟ್ರೀಯ ಹಿತದೃಷ್ಟಿಯಿಂದ, ಪ್ರಧಾನಿ ಮತ್ತು ರಕ್ಷಣಾ ಸಚಿವರು ಚೀನಾ ಜೊತೆಗಿನ ಗಡಿ ವಿಷಯದಲ್ಲಿ ರಾಷ್ಟ್ರಕ್ಕೆ ಸ್ಪಷ್ಟ ಚಿತ್ರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.