ಬೆಂಗಳೂರು: ನಗರದಲ್ಲಿ ಪೊಲೀಸ್ ಸಿಬ್ಬಂದಿಗೂ ಕೊರೊನಾ ಮಹಾಮಾರಿ ಬೆನ್ನು ಬಿದ್ದಿರುವುದಕ್ಕೆ ಇಲಾಖೆ ವಿಷಾದ ವ್ಯಕ್ತಪಡಿಸುತ್ತಿದೆ. ಸಶಸ್ತ್ರ ಮೀಸಲು ಪಡೆಯ ಒಬ್ಬರು ಸೇರಿದಂತೆ 6 ಜನರಿಗೆ ಸೋಂಕು ತಗುಲಿದೆ.
ಹೊಸದಾಗಿ ಕೆ.ಆರ್.ಮಾರ್ಕೆಟ್ ಸಿಬ್ಬಂದಿಯೊಬ್ಬರಿಗೆ ಮಂಗಳವಾರ ಸೋಂಕು ತಗುಲಿದ್ದು, ಆ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಸೋಮವಾರವಷ್ಟೇ ಸೋಲದೇವನಹಳ್ಳಿ ಠಾಣೆಯ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಆ ಠಾಣೆಯನ್ನು ಸಹ ಬಂದ್ ಮಾಡಲಾಗಿದೆ.
ರಾಷ್ಟ್ರ ಮತ್ತು ರಾಜ್ಯದಲ್ಲಿ ಕ್ವಾರಂಟೈನ್ಗೆ ಒಳಪಟ್ಟವರಲ್ಲಿ ಸರಾಸರಿ ಶೇ.3ರಷ್ಟು ಮಂದಿಗೆ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ನಗರದಲ್ಲಿ ಅಪರಾಧಿಗಳು ಸೇರಿದಂತೆ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಲವು ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ, ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಹೆಬ್ಬಗೋಡಿ ಠಾಣೆಯಲ್ಲಿ 30 ಸಿಬ್ಬಂದಿ, ಚಾಮರಾಜಪೇಟೆ ಠಾಣೆಯಲ್ಲಿ 23 ಸಿಬ್ಬಂದಿ, ಫ್ರೇಜರ್ಟೌನ್ ಠಾಣೆಯಲ್ಲಿ 40 ಸಿಬ್ಬಂದಿ, ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ 16 ಸಿಬ್ಬಂದಿ, ಸೋಲದೇವನಹಳ್ಳಿ ಠಾಣೆಯಲ್ಲಿ 15 ಸಿಬ್ಬಂದಿ, ಜೆ.ಜೆ. ನಗರ ಠಾಣೆಯಲ್ಲಿ 33 ಸಿಬ್ಬಂದಿ, ಜೆ.ಬಿ ನಗರ ಠಾಣೆಯಲ್ಲಿ 20 ಸಿಬ್ಬಂದಿ,ಕೆ.ಆರ್.ಮಾರ್ಕೆಟ್ ಠಾಣೆಯಲ್ಲಿ 8 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.