ಬಳ್ಳಾರಿ:ಸಾರಿಗೆ ಇಲಾಖೆ ನೌಕರರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ. ಕೆಲವು ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ಎನ್ನುವ ವದಂತಿ ಹಬ್ಬಿದೆ. ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಕೆಲವು ಹೆಚ್ಚುವರಿ ನೌಕರರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ಇನ್ನು ಲಾಕ್ ಡೌನ್ ನಿಂದ ಸಾರಿಗೆ ಇಲಾಖೆಗೆ 1,800 ಕೋಟಿ ರೂ. ನಷ್ಟದಲ್ಲಿದೆ ಎಂದು ತಿಳಿಸಿದರು. ಈ ಮೂಲಕ ಕಳೆದೆರೆಡು ದಿನಗಳಿಂದ ಸಾರಿಗೆ ನೌಕರರಲ್ಲಿ ಮನೆ ಮಾಡಿದ್ದ ಆತಂಕ ಕೊನೆಗೂ ನಿವಾರಣೆಯಾಗಿದೆ.
ಇತ್ತಿಚೆಗಷ್ಟೆ ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿ ಅಂಜುಮ್ ಫರ್ವೇಜ್ ನಷ್ಟದಲ್ಲಿರುವ ಸಾರಿಗೆ ಇಲಾಖೆ ಚೇತರಿಸಿಕೊಳ್ಳುವ ದೃಷ್ಟಿಯಿಂದ ಸರ್ಕಾರಕ್ಕೆ ಕೆಲವು ಶಿಫಾರಸ್ಸುಗಳನ್ನು ಮಾಡಿದ್ದರು ಎನ್ನಲಾಗಿದೆ. ಅವರು ಶಿಫಾರಸ್ಸು ಮಾಡಿದ ಅಂಶಗಳು ಸಂಪೂರ್ಣ ಸಿಬ್ಬಂಧಿ ವಿರೋಧಿಯಾಗಿದ್ದವು ಎಂಬ ಆರೋಪವೂ ಕೇಳಿ ಬಂದಿತ್ತು.
ಸಾರಿಗೆ ನೌಕರರ ಸಮಸ್ಯೆಗಳ ಕುರಿತು ಉತ್ತರಪ್ರಭ ಬೆಳಕು ಚೆಲ್ಲಿತ್ತು. ಆದರೆ ಕೊನೆಗೂ ಶಿಫಾರಸ್ಸಿನ ವಿಚಾರವನ್ನು ಪ್ರಾಸ್ತಾಪಿಸದೇ ವಂದಂತಿ ಎಂದು ಹೇಳುವ ಮೂಲಕ ಸಿಬ್ಬಂಧಿಗಳ ಆತಂಕಕ್ಕೆ ಸಾರಿಗೆ ಸಚಿವರು ತೆರೆ ಎಳೆದಿದ್ದಾರೆ. ಏನೇ ಆಗಲಿ ಕೊನೆಗೂ ಸಾರಿಗೆ ಸಚಿವರಿಂದ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿತಲ್ಲ ಎನ್ನುವ ಸಮಾಧಾನ ಸಿಬ್ಬಂಧಿಗಳಲ್ಲಿ ಮೂಡಿದಂತಾಗಿದೆ.