ಬೆಂಗಳೂರು: 2003ರ ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಯ್ದೆ ತಿದ್ದುಪಡಿಗೆ ನನ್ನ ಸಂಪೂರ್ಣ ವಿರೋಧವಿದೆ. ಕರ್ನಾಟಕಕ್ಕೆ ವಿದ್ಯುತ್ನ ಸಮರ್ಥ ನಿರ್ವಹಣೆಯ ಸಾಮರ್ಥ್ಯ ಇದೆ. ತಿದ್ದುಪಡಿಯು ಜಾರಿಗೆ ಬಂದರೆ ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣಕ್ಕೆ ವಿದ್ಯುತ್ ಕ್ಷೇತ್ರ ಒಳಪಡುತ್ತದೆ. ವಿದ್ಯುತ್ ದರ ನಿಗದಿಯೂ ಅವರ ಇಚ್ಛೆಯಂತೆಯೇ ನಡೆದು, ದರ ಅಧಿಕವಾಗುತ್ತದೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಜನರಿಗೆ ಬೆಲೆ ಏರಿಕೆ ಬರೆಯ ಜೊತೆಗೆ 70 ವರ್ಷಗಳಿಂದ ಕಟ್ಟಿ ಬೆಳೆಸಿದ ವಿದ್ಯುತ್ ಇಲಾಖೆಯನ್ನು ಹಾಳು ಮಾಡಲು ಬಿಜೆಪಿ ಸರ್ಕಾರ ಮುಂದಾಗಿರುವುದು ಅತ್ಯಂತ ಕೆಟ್ಟ ಬೆಳವಣಿಗೆ. ಇಂತಹ ಪ್ರಯತ್ನಕ್ಕೆ ಅವಕಾಶ ಕೊಡಕೂಡದು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.