ಕೊಪ್ಪಳದಲ್ಲಿ ವಿವಿಧೆಡೆ 13 ಬಾಲ್ಯವಿವಾಹಕ್ಕೆ ತಡೆ
ಕೊಪ್ಪಳ: ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮೇಲ್ವಿಚಾರಕರು, ಶಾಲಾ ಮುಖ್ಯೋಪಾಧ್ಯಾಯರು, ಪೊಲೀಸ್ ಇಲಾಖೆಯ ಸಿಬ್ಬಂದಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡವು ಜಿಲ್ಲೆಯ ಆಯಾ ತಾಲೂಕಿನ ಗ್ರಾಮಗಳಲ್ಲಿ ಒಟ್ಟು 13 ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದಾರೆ.
ಕೋವಿಡ್-19 ಪ್ರಯುಕ್ತ ಲಾಕ್ಡೌನ್ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯ ವಿವಿಧೆಡೆ ನಡೆಯುತ್ತಿದ್ದ ಬಾಲ್ಯ ವಿವಾಹಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ತಡೆಗಟ್ಟಲಾಗಿದೆ.
ಏಪ್ರಿಲ್ 14 ರಂದು ಕುಷ್ಟಗಿ ತಾಲೂಕಿನ ಹನುಮಸಾಗರ, ಏ.15 ರಂದು ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ, ಏ.24 ರಂದು ಗಂಗಾವತಿಯ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ, ಏ.25 ರಂದು ವಿರುಪಾಪೂರ ಗ್ರಾಮದಲ್ಲಿ, ಏ.26 ರಂದು ಕುಷ್ಟಗಿ ತಾಲೂಕಿನ ಮುದ್ದಲಗುಂದಿ ಗ್ರಾಮದಲ್ಲಿ, ಏ.28 ರಂದು ಗಂಗಾವತಿಯ ಹಿರೇಜಂತಕಲ್ ಗ್ರಾಮದಲ್ಲಿ, ಮೇ 02 ರಂದು ಗಂಗಾವತಿಯ ಹಣವಾಳ ಗ್ರಾಮದಲ್ಲಿ, ಮೇ.11 ರಂದು ಗಂಗಾವತಿಯ ಹೊಸ ಅಯೋಧ್ಯ ಮತ್ತು ಶ್ರೀರಾಮ ನಗರ ಗ್ರಾಮದಲ್ಲಿ, ಮೇ.12 ರಂದು ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದಲ್ಲಿ ಮತ್ತು ಮೇ 14 ರಂದು ಅಳವಂಡಿ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಬಾಲ್ಯವಿವಾಹಗಳನ್ನು ತಡೆದಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.