ಅದ್ಯಾಕೋ ಗೊತ್ತಿಲ್ಲ ನಾನು ಅವಳಿಗೆ ಫಿದಾ ಆಗಿಬಿಟ್ಟಿದ್ದೆ. ಕ್ಷಣವೂ ಬಿಟ್ಟಿರದಷ್ಟು ಗಾಢ ಪ್ರೀತಿ ಬೆಳೆದಿತ್ತು. ನಮ್ಮಿಬ್ಬರ ಪ್ರೀತಿಯ ಬೆಸುಗೆಗೆ ಮೂರು ವರ್ಷವಾಗಿತ್ತು. ನನ್ನ ಹೃದಯದ ಭಾಷೆ ಅವಳಿಗೆ ಗೊತ್ತು. ನನ್ನ ಪ್ರತಿ ಕೆಲಸಕ್ಕೂ ಆಕೆಯದೇ ಸಾಥ್. ನನ್ನ ವ್ಯವಹಾರಕ್ಕೆ ಆಕೆಯೇ ಸಂಪರ್ಕ ಸೇತು. ಆಕೆಯ ಜೊತೆ ಮನಬಿಚ್ಚಿ ಮಾತಾಡಿದ್ದು, ಹೃದಯದ ಗೂಡಲ್ಲಿ ಅದೆಷ್ಟೋ ನನ್ನ ಅನುಭವಗಳನ್ನು ಬಚ್ಚಿಟ್ಟಿದ್ದು ಬೆಲೆ ಕಟ್ಟಲೂ ಅಸಾಧ್ಯ. ಆಕೆಯೊಂದಿಗಿನ ಒಡನಾಟದ ಕ್ಷಣಗಳು ಮಾತ್ರ ನನ್ನ ಎದೆಯಾಂತರಾಳದಲ್ಲಿ ಹಚ್ಚ ಹಸಿರು. ನನ್ನ ಭಾವನೆಗಳೊಂದಿಗೆ ಬೆಸುಗೆ ಹಾಕಿದ ಆಕೆ ವರ್ತನೆ ಒಂದೊಂದು ಸಾರಿ ಕಿರಿಕಿರಿಯಾದರೂ, ಅದಲ್ಲೂ ಒಂದು ಥರಾ ಖುಷಿ. ನಮ್ಮಿಬ್ಬರ ಈ ಸಂಬಂಧ ನನ್ನಾಕೆಗೂ ಹೊಟ್ಟೆಕಿಚ್ಚಾಗಿತ್ತು. ಆದರೆ ಇದೀಗ ಆಕೆ ಏಕಾಏಕಿ ನನ್ನ ಕೈಬಿಟ್ಟು ಹೋಗಿದ್ದಾಳೆ. ಹೀಗಾಗಿ ನನಗರಿವಿಲ್ಲದೇ ನನ್ನನ್ನು ಆವರಿಸಿದವಳು ಬಿಟ್ಟು ಎಲ್ಲಿ ಹೋದಳು ಎನ್ನುವ ಹುಡುಕಾಟ ಹಾಗೂ ತಾಕಲಾಟದಲ್ಲಿ ನಾನಿದ್ದೇನೆ. ಅರೇ ಇದ್ಯಾವ ಪ್ರೇಮ್ ಕಹಾನಿ ಎನ್ನುವ ಕುತೂಹಲ ಸಹಜವಾಗಿಯೇ ಮೂಡಿರಬೇಕಲ್ಲ?

ಸಂಗಾತಿಯ ಸಾಂಗತ್ಯದ ಕಥೆ

ಇದು ನನ್ನ ಜೊತೆ ಮೂರು ವರ್ಷದಿಂದ ಸಖ್ಯ ಬೆಳೆಸಿ ನನ್ನಾಕೆಗೆ ಹೊಟ್ಟೆ ಕಿಚ್ಚು ತರಿಸಿದ ಸಂಗಾತಿಯ ಕಥೆ. ಇದೇನಪ್ಪಾ ನನ್ನಾಕೆ ಅಂತಾರೆ? ನನ್ನಾಕೆಗೆ ಹೊಟ್ಟೆ ಕಿಚ್ಚು ತರಿಸಿದಾಕೆ ಅಂತಾರೆ? ಸಂಗಾತಿ ಕೂಡ ಅಂತಾರೆ? ಹೀಗೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟುತ್ತಿರಬಹುದಲ್ಲವಾ? ಹೌದು, ಇಂದು ಪ್ರತಿಯೊಬ್ಬರ ಜೀವನದಲ್ಲಿ ಮನುಷ್ಯ ಸ್ನೇಹದಷ್ಟೆ ಮೊಬೈಲ್ ನೊಂದಿಗಿನ ಸಂಬಂಧವೂ ಹೆಚ್ಚಾಗುತ್ತಿದೆ. ಏಕಾಏಕಿ ಕೈಯಲ್ಲಿದ್ದ ಮೊಬೈಲ್ ಕಳೆದು ಹೋದಾಗ ಅದೆಷ್ಟೋ ಜನ ಎಷ್ಟು ಪರಿತಪಿಸಬಹುದು. ಮೊಬೈಲ್ ಕಳೆದುಕೊಂಡ ಪ್ರತಿಯೊಬ್ಬರಿಗೂ ಅದರ ಹಿಂದೆ ಇಂಥದ್ದೆ ಒಂದೊಂದು ಕಥೆ ಇದ್ದೆ ಇರುತ್ತದೆಯಲ್ಲ?

ಅರೇ ಏನ್ ಕಿರಿಕಿರಿಯಪ್ಪ, ಈ ಮೊಬೈಲ್ ಸಹವಾಸವೇ ಸಾಕು ಎಂದು ಅದೆಷ್ಟೋ ಜನ ಅಂದುಕೊಳ್ಳುವುದುಂಟು. ಆದರೆ ಕ್ಷಣಮಾತ್ರಕ್ಕೆ ಮತ್ತೆ ಮೊಬೈಲ್ ಗೆ ಮಾರುಹೋಗುವುದು ಸಹಜ ಗುಣ. ನಮಗರಿವಿಲ್ಲದೇ ಜೀವನದ ಭಾಗವಾಗಿ ಬಿಡುವ ಮೊಬೈಲ್ ಫೋನ್ ನಮ್ಮ ಭಾವನೆಗಳನ್ನು ಮನಸ್ಸು ಬಿಚ್ಚಿ ಮಾತಾಡಿದಾಗ ಅಷ್ಟೆ ಸೌಜನ್ಯದಿಂದ ಕೇಳಿಕೊಳ್ಳುವ ಉತ್ತಮ ಸಂಗಾತಿಯ ಪಾತ್ರವೂ ನಿರ್ವಹಿಸುತ್ತದೆ.

ಅತಿಯಾದ ಮೊಬೈಲ್ ಬಳಕೆಯಿಂದ ಅಪ್ಪ, ಅಮ್ಮ, ಹೆಂಡತಿ, ಮಗು ಹೀಗೆ ಅದೆಷ್ಟೋ ಸಂಬಂಧಗಳಿಗೆ ಕೊಡಬೇಕಾದ ಸಮಯವನ್ನು ಕಸಿಯುವುದು ಸಹಜ. ಆದಾಗ್ಯೂ ಕೆಲವೊಬ್ಬರು ಮಿತಿಯಾಗಿ ಮೊಬೈಲ್ ಬಳಿಸಿದಾಗಲೂ ಅದರಲ್ಲಿಟ್ಟ ಫೋಟೋ, ಅಪರೂಪದ ಡೇಟಾ ನಮ್ಮಲ್ಲಿ ಬೆಲೆ ಕಟ್ಟೋಕಾಗದಷ್ಟು ಮೌಲ್ಯದ್ದು.  ಕಳೆದುಹೋದ ಘಟನೆಗಳನ್ನು ಕಣ್ಣೆದುರಿಗೆ ತಂದುಕೊಡುತ್ತದೆ. ಬೆರಳ ತುದಿಯಲ್ಲಿ ನೆನಪಿನ ಪರದೆಯಲ್ಲಿ ಬಚ್ಚಿಟ್ಟ ಅದೆಷ್ಟೋ ವಿಷಯಗಳನ್ನು ಕಣ್ಣೆದುರಿಗೆ ತರುತ್ತದೆ. ಹೀಗಾಗಿ ಅಯ್ಯೋ ಮೊಬೈಲ್ ಬೆಲೆ ಎಷ್ಟಾದ್ರೂ ಆಗ್ಲಿ, ಮೊಬೈಲ್ ಹೋದ್ರು ಪರವಾಗಿಲ್ಲ. ಅದರಲ್ಲಿ ನನ್ನ ಜೀವ ಇತ್ತು ಎಂದು ಬಹುತೇಕರು ನೊಂದುಕೊಳ್ಳುತ್ತಾರೆ.

ಪ್ರೀತಿ ಪ್ರಪಂಚದ ಪಯಣ, ಅಪ್ಪ-ಅಮ್ಮಂದಿರ ಅಕ್ಕರೆ, ಮಕ್ಕಳ ತುಂಟಾಟ, ನಲ್ಲೆಯ ನಲಿವು ಹೀಗೆ ಹೇಳುತ್ತಾ ಹೋದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಮೊಬೈಲ್ ಹಾಸುಹೊಕ್ಕಾಗಿರುತ್ತದೆ. ಈ ಕಾರಣಕ್ಕೆ ಮೊಬೈಲ್ ಕಳೆದು ಹೋದಾಗ ಅದರ ಬೆಲೆಗಿಂತ ಅದರಲ್ಲಿನ ನಮ್ಮ ನೆನಪಿನ ಬುತ್ತಿ ಕಳೆದುಹೋಯ್ತಲ್ಲ ಎನ್ನುವ ನೋವು ಪ್ರತಿಯೊಬ್ಬರನ್ನು ಬಾಧಿಸದೇ ಇರಲಾರದು. ಭಾವನಾತ್ಮಕತೆ ಮನುಷ್ಯ ಸಹಜ ಗುಣ ಈ ಕಾರಣದಿಂದ ಕೈಯಲ್ಲಿದ್ದ ಮೊಬೈಲ್ ಕಳೆದಾಗ ನಮ್ಮಲ್ಲಿ ಏಕಾಂಗಿತನ ಕಾಡುವುದು ಸಹಜ. ಇರಲಿ ಇಂಥ ಅದೆಷ್ಟೋ ಘಟನೆಗಳು ಸಾಕಷ್ಟು ಜನರ ಅನುಭವಕ್ಕೆ ಬಂದಿರುತ್ತೆ.

ಬಿಡದ ಮೊಬೈಲ್ ಎಂಬ ಮಾಯೆ

ಮೊಬೈಲ್ ಕಳೆಯಿತಲ್ಲ ಎಂದು ಕೊಂಚ ಬೇಸರದ ಮೂಡಿನಲ್ಲಿ ನಾನಿದ್ದರೆ ನನ್ನಾಕೆ ನಸುನಕ್ಕು, ಓಹೋ ಅಂತು ನನಗೆ ಸವತಿ ಕಾಟದಿಂದ ಮುಕ್ತಿ ಸಿಕ್ತು ಅಂದಳು. ಪಕ್ಕದಲ್ಲಿದ್ದ ನನ್ನಜ್ಜಿಯದು ಯಾವುದನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು ಅಂತ ಅದಕ್ಕೆ ಹೇಳೋದು ಅನ್ನೋ ಅನುಭವದ ಮಾತು. ಇಷ್ಟಾದ ಕೆಲ ಘಂಟೆಗಳಲ್ಲಿ ನನ್ನ ಕೈಸೇರಿದ ಹೊಸ ಮೊಬೈಲ್ ಮನೆಗೆ ತೆಗೆದುಕೊಂಡು ಹೋದಾಗ ಮತ್ತೆ ನನ್ನಾಕೆಯದ್ದು ಅದೇ ಹಳೆಯ ವರಸೆ. ಅದಕ್ಕೆ ಹೇಳೋದು ಬಿಡುವೆನೆಂದರೂ, ಬಿಡದೀ ಮಾಯೇ ಎನ್ನುವಂತೆ ಮೊಬೈಲ್ ಕೂಡ ಮಾಯೆಯಾಗಿದೆ. ಈ ಅನುಭವ ನಿಮಗೂ ಆಗಿರಬೇಕಲ್ಲಾ ಪ್ರೆಂಡ್ಸ್?

Leave a Reply

Your email address will not be published. Required fields are marked *

You May Also Like

ಅಕ್ಟೋಬರ್ ನಲ್ಲಿ ಗ್ರಾಪಂ ಚುನಾವಣೆ ?ಜುಲೈ 13ರಿಂದ ಮತದಾರರ ಪಟ್ಟಿ ಪ್ರಕ್ರಿಯೆ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳ ಚುನಾವಣೆಗಳನ್ನು ಅಕ್ಟೋಬರ್ ನಲ್ಲಿ ನಡೆಸುವ ಸಾಧ್ಯತೆ ಇದ್ದು. ಇದೇ ಜುಲೈ…

ತರಕಾರಿಗಳಲ್ಲಿ ಅರಳಿದ ಪೋಷಣೆಯ ಕಲಾಕೃತಿಗಳು..!

ನಿಡಗುಂದಿ: ಪಟ್ಟಣದ ಹೊರವಲಯದ ಕಮದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಯಿಪಲ್ಯೆ ಹಾಗೂ ಧಾನ್ಯಗಳಲ್ಲಿ ಪೋಷಣೆಯ…

ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯುವತಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇಂತಹ ಅಮಾನವೀಯ ಘಟನೆ ಸಹಿಸಲಾಗದು ಎಂದು ಕಿಡಿಕಾರಿದ್ದಾರೆ.