ಗದಗ: ಗರ್ಭಿಣಿಯರಿಗೆ ಪೂರೈಸಿದ ಆಹಾರ ಪದಾರ್ಥಗಳನ್ನು ಮನೆಗೆ ಒಯ್ಯುವಾಗ ಅಂಗನವಾಡಿ ಶಿಕ್ಷಕಿಯೊಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಒಂದನೇ ವಾರ್ಡಿನ ಅಂಗನವಾಡಿ ಸಂಖ್ಯೆ 92ರ ಶಿಕ್ಷಕಿ ಈರಮ್ಮ ಮೇಟಿ ಈ ಆರೋಪಕ್ಕೆ ಗುರಿಯಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗರ್ಭಿಣಿಯರಿಗಾಗಿ ನೀಡಿದ ಹೆಸರು ಕಾಳು, ತೊಗರಿ ಬೇಳೆ, ಸಕ್ಕರೆ, ಶೇಂಗಾ ಚಿಕ್ಕಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಅಂಗನವಾಡಿ ಕಾರ್ಯಕರ್ತೆ ಮನೆಗೆ ಒಯ್ಯುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪವಾಗಿತ್ತು. ಹೀಗಾಗಿ ಮನೆಗೆ ಒಯ್ಯುತ್ತಿರುವಾಗ ಗ್ರಾಮಸ್ಥರು ಅಂಗನವಾಡಿ ಶಿಕ್ಷಕಿಯನ್ನು ತಡೆದು ಗ್ರಾಮ ಪಂಚಾಯತಿ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ.
ಗರ್ಭಿಣಿಯರಿಗಾಗಿ ಇಲಾಖೆ ವಿತರಿಸಿದ ಆಹಾರ ಸಾಮಾಗ್ರಿಗಳನ್ನು ಶಿಕ್ಷಕಿ ಮನೆಗೆ ಒಯ್ಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಗ್ರಾಮ ಪಂಚಾಯತಿ ಪಿಡಿಓ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಮಾಹಿತಿ ನಿಡಿದ್ದಾರೆ. ತಮ್ಮ ಮೇಲಿನ ಆರೋಪದ ಕುರಿತು ಉತ್ತರಪ್ರಭ ಶಿಕ್ಷಕಿ ಈರಮ್ಮ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು, ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.