ಬೆಂಗಳೂರು: ದೇಶಾದ್ಯಂತ ಲಾಕ್ ಡೌನ್ ಮದ್ಯೆಯೂ ನಟ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ಇತ್ತಿಚೆಗಷ್ಟೆ ನಡೆದಿತ್ತು. ವಿವಾಹ ಸಂದರ್ಭದಲ್ಲಿ ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಮದುವೆಗಾಗಿ ಅನುಮತಿ ನೀಡಿರುವ ವಾಹನಗಳ ಸಂಖ್ಯೆಯನ್ನು ಜಿಲ್ಲಾಧಿಕಾರಿ ನಮೂದಿಸಿರಲಿಲ್ಲ. ವಿವಾಹದಲ್ಲಿ ಪಾಲ್ಗೊಳ್ಳುವುದಕ್ಕೆ ಜನರ ಮಿತಿ ನಿಗದಿಪಡಿಸಬೇಕು. ಕೇಂದ್ರದ ಮಾರ್ಗಸೂಚಿಯಲ್ಲಿ ಡಿಸಿಗೆ ವಿವಾಹ ನಿಯಂತ್ರಣ ಅಧಿಕಾರವಿತ್ತು. ಆದರೆ ಏ.15. ರ ಮಾರ್ಗಸೂಚಿಯಲ್ಲಿ ವಿವಾಹಕ್ಕೆ ಸಂಖ್ಯಾ ಮಿತಿ ನಿಗದಿಪಡಿಸಿರಲಿಲ್ಲ. ಮೇ.1 ರ ಮಾರ್ಗಸೂಚಿಯಲ್ಲಿ 50 ಜನರ ಮಿತಿ ನಿಗದಿಪಡಿಸಲಾಗಿತ್ತು. ಈ ಕಾರಣದಿಂದ ಏ.17 ರಂದು ನಡೆದ ನಿಖಿಲ್ ವಿವಾಹಕ್ಕೆ ಸಂಖ್ಯಾ ಮಿತಿ ವಿಧಿಸಬೇಕಿತ್ತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ನಿಖಿಲ್ ವಿವಾಹದಲ್ಲಿ ಲಾಕ್ ಡೌನ್ ಉಲ್ಲಂಘನೆಯಾಗಿರುವ ಬಗ್ಗೆ ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ದೇಶಾದ್ಯಂತ ಲಾಕ್ಡೌನ್ ಇದ್ದಿದ್ದರಿಂದಾಗಿ, ನಿಖಿಲ್ ಮದುವೆಯನ್ನು ಸರಳವಾಗಿ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದರು. ಅದರಂತೆ ಲಾಕ್ಡೌನ್ ಸಂದರ್ಭದಲ್ಲಿ ನಿಖಿಲ್ ವಿವಾಹ ನಡೆದಿತ್ತು. ಆದರೆ, ಮುಂದೆ ಇಂಥ ಲೋಪ ಮರುಕಳಿಸಲಿಲ್ಲ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲಗೋಳ ಹೈಕೋರ್ಟ್ ಗೆ ವಿನಂತಿ ಮಾಡಿಕೊಂಡಿದ್ದಾರೆ. ಆದರೆ ವಾಹನಗಳ ವಿಚಾರದಲ್ಲಿ ಖಡಕ್ ನಿರ್ಧಾರ ತೆಗೆದುಕೊಂಡಿರುವ ಹೈಕೋರ್ಟ್ ಅನುಮತಿ ನೀಡಿದ್ದರ ಬಗ್ಗೆ ವಿವರಣೆ ಕೇಳಿದೆ.