ಗದಗ: ಐದು ವರ್ಷಕ್ಕೊಮ್ಮೆ ಮಹತ್ವದ ಚುನಾವಣೆ ಬರುತ್ತೆ. ಆ ಚುನಾವಣೆಲಿ ನಾವೇ ದಾರಿ ತಪ್ಪುತ್ತೇವೆ. ಅದರಿಂದ ಮುಂದಿನ ಐದು ವರ್ಷವೂ ರಾಜಕೀಯ ದಾರಿ ತಪ್ಪುತ್ತೆ. ಜನಪ್ರತಿನಿಧಿಗಳದ್ದಷ್ಟೇ ದೋಷ ಇರಲ್ಲ. ಅವರನ್ನು ಆಯ್ಕೆ ಮಾಡುವ ಜನರ ದೋಷವೂ ಇದೆ ಎಂದು ತೋಂಟದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ನಾವು ಯೋಗ್ಯ ವ್ಯಕ್ತಿಗಳನ್ನು ಆರಿಸಿ ತರಬೇಕು. ಹಣ-ಹೆಂಡಕ್ಕೆ ಆಸೆ ಪಟ್ಟು ಅಯೋಗ್ಯರನ್ನ ಚುನಾವಣೆಯಲ್ಲಿ ಆರಿಸಿ ತಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಬೇವಿನ ಬೀಜವ ಬಿತ್ತಿ ಮಾವಿನ ಫಲ ಬೇಕೆಂದರೆ ಹೇಗೆ? ಸ್ವಾರ್ಥ, ಆಮೀಷಕ್ಕೋಳಗಾಗಿ ಕೆಟ್ಟ ರಾಜಕಾರಣಿಗಳನ್ನು ಆಯ್ಕೆ ಮಾಡಿದರೆ ಇದೇ ರೀತಿ ಸಮಾಜದ ಸ್ವಾಥ್ಯ ಹಾಳಾಗುತ್ತದೆ ಎಂದು ತಿಳಿಸಿದರು.
ಮೀಸಲಾತಿಯಿಂದ ಯಾರಿಗೆ ಲಾಭವಾಗುತ್ತೆ
ಮೀಸಲಾತಿಯನ್ನು ಉಳ್ಳವರೆ ಪಡೆದುಕೊಳ್ಳುವಂತೆ ಆಗಬಾರದು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ದೊರಕಬೇಕಿದೆ. ಸಾಮಾನ್ಯ ಜನರಿಗಾಗಿ ಸರ್ಕಾರ ಮೀಸಲಾತಿಯ ಹೊಸ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಸಮಾಜದಲ್ಲಿ ಹಿಂದುಳಿದ ಜನರಿಗೆ ಅವಕಾಶ ಒದಗಿಸುವ ಕೆಲಸವೇ ಸರ್ಕಾರದ ಉದ್ದೇಶ ಎಂದರು. ಪಂಚಮಸಾಲಿ ಸಮಾಜ ನಾಲ್ಕು ತಿಂಗಳಿದ ಹೋರಾಟ ಮಾಡುತ್ತಾ ಬಂದಿದೆ. ನಾಲ್ಕು ತಿಂಗಳ ಹಿಂದೆಯೆ ಸರ್ಕಾರ ಸಮಿತಿ ರಚಿಸಬೇಕಿತ್ತು. ಆ ವಿಚಾರದಲ್ಲಿ ಸರ್ಕಾರ ಸ್ವಲ್ಪ ತಡ ಮಾಡಿದೆ. ಸರ್ಕಾರ ಈಗ ಸಮಿತಿ ರಚಿಸಿದ್ದು ಸಮಾಜದಲ್ಲಿ ಸಂತಸವಿದೆ. ಮೀಸಲಾತಿ ಮಾಡುವುದರಿಂದ ಯಾರಿಗೆ ತೊಂದರೆಯುಂಟಾಗುತ್ತೆ. ಯಾರಿಗೆ ಲಾಭವಾಗುತ್ತೆ ಎನ್ನುವುದು ತಿಳಿದುಕೊಳ್ಳಬೇಕು. ಸಚಿವರು, ಶಾಸಕರು, ರಾಜಕಾರಣಿಗಳು ಪಕ್ಷ ಬೇಧ ಮರೆತು ಹೋರಾಟ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದರು.