ಬೆಂಗಳೂರು : ರಾಜ್ಯದಲ್ಲಿ ಗ್ರಾಪಂಗೆ ಡಿಸೆಂಬರ್ ಸಮಯದಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಸದ್ಯ ಈ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಪ್ರಸಕ್ತ ಸಾಲಿನ ಗ್ರಾಪಂ ಚುನಾವಣೆಯನ್ನು 2021ರ ಫೆಬ್ರವರಿ ಸಂದರ್ಭದಲ್ಲಿ ನಡೆಸುವ ಸಾಧ್ಯತೆ ದಟ್ಟವಾಗಿದೆ. ಚುನಾವಣೆ ನಡೆಸುವ ಕುರಿತು ಡಾ. ಎಂ.ಕೆ. ಸುದರ್ಶನ್ ನೇತೃತ್ವದ ತಜ್ಞರ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಡಿಸೆಂಬರ್ ಸಮಯದಲ್ಲಿ ಗ್ರಾಪಂ ಚುನಾವಣೆ ನಡೆಸುವುದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕು ಹೆಚ್ಚಾಗಲು ದಾರಿ ಮಾಡಿ ಕೊಟ್ಟಂತಾಗುತ್ತದೆ. ಒಂದು ವೇಳೆ ಈ ಸಂದರ್ಭದಲ್ಲಿ ಚುನಾವಣೆ ನಡೆಸಿದರೆ, ನಾವೇ ಮನೆ ಬಾಗಿಲುವರೆಗೆ ಸೋಂಕು ತಂದತ್ತಾಗುತ್ತದೆ ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಡಿಸೆಂಬರ್ ಸಂದರ್ಭದಲ್ಲಿ ಚುನಾವಣೆ ನಡೆಸಬಾರದು ಎಂಬುವುದು ತಜ್ಞರ ಒಟ್ಟಾರೆ ಅಭಿಪ್ರಾಯವಾಗಿದೆ. ಹೀಗಾಗಿ ಫೆಬ್ರವರಿ ಸಮಯಕ್ಕೆ ಇದನ್ನು ಮುಂದೂಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ನವೆಂಬರ್ ಅಥವಾ ಡಿಸೆಂಬರ್ ಸಮಯದಲ್ಲಿ ಗ್ರಾಪಂ ಚುನಾವಣೆ ನಡೆಸಬೇಕೆಂದು ಸರ್ಕಾರ, ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಪ್ರಕರಣ ನ್ಯಾಯಾಲಯದಲ್ಲಿದ್ದು, ಕೋರ್ಟ್ ಮತ್ತು ಆಯೋಗ ಚುನಾವಣಾ ದಿನಾಂಕವನ್ನು ನಿಗದಿ ಪಡಿಸಲಿದೆ, ಆದರೆ ನಾವು ಚುನಾವಣೆಯನ್ನು ಫೆಬ್ರವರಿಗೆ ಮುಂದೂಡುವಂತೆ ಮನವಿ ಮಾಡಿದ್ದೇವೆ ಎಂದು ಸುಧಾಕರ್ ತಿಳಿಸಿದ್ದಾರೆ.