ರೋಣ: ತಾಲೂಕಿನ ಇಟಗಿಯ ಧರ್ಮ ದೇವತೆ ಭೀಮಾಂಬಿಕಾ ಜಾತ್ರೆಯ ನಿಮಿತ್ಯ ತಹಸೀಲ್ದಾರ ಕಚೇರಿಯಲ್ಲಿಂದು ತಹಸೀಲ್ದಾರ್ ಜೆ.ಬಿ.ಜಕ್ಕನಗೌಡರ್ ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ ಸಭೆ ಜರುಗಿತು.
ಕೊರೋನ ಹಿನ್ನೆಲೆ ಈ ಭಾರಿ ಶ್ರೀಕ್ಷೇತ್ರ ಇಟಗಿಯ ಧರ್ಮದೇವತೆ ಭೀಮಾಂಬಿಕಾ ಜಾತ್ರೆಯನ್ನು ವಿಜೃಂಭಣೆಯಿಂದ ಮಾಡದೆ ಸಂಕ್ಷಿಪ್ತವಾಗಿ ಮಾಡಬೇಕು. ಹಾಗು ಸರ್ಕಾರದ ನಿರ್ದೇಶನದಂತೆ ನೂರು ಜನಕ್ಕಿಂತ ಹೆಚ್ಚು ಜನ ಸೇರಕೂಡದು ಎಂದು ತಾಲೂಕಾ ದಂಡಾಧಿಕಾರಿ ಜೆ.ಬಿ.ಜಕ್ಕನಗೌಡರ್ ಸಭೆಗೆ ಹಾಜರಿದ್ದ ಗ್ರಾಮದ ಹಿರಿಯರಿಗೆ ಸೂಚಿಸಿದರು.
ಈ ವೇಳೆ ಗ್ರಾಮದ ಪ್ರಮುಖ ಪ್ರಭು ಮೇಟಿ, ಜಾತ್ರಾ ಕಮೀಟಿಯ ಹಿರಿಯರ ಅಭಿಪ್ರಾಯದಂತೆ ರಥ ನಿರ್ಮಾಣ ಮಾಡಿ ಹತ್ತು ಹೆಜ್ಜೆಯಾದರೂ ತೇರು ಎಳೆಯಲು ಅವಕಾಶ ಕೊಡುವಂತೆ ಮನವಿ ಮಾಡಿದರು. ಆದರೆ ರಥ ಎಂದ ಕೂಡಲೇ ಜನ ಜಾಸ್ತಿ ಕೂಡಿ ಗದ್ದಲ ಉಂಟಾಗುವ ಸಾಧ್ಯತೆ ಇರುತ್ತಿದೆ. ಇದರಿಂದ ಕೋವಿಡ್19 ನಿಯಮ ಉಲ್ಲಂಘನೆಯಾಗುತ್ತದೆ. ಹೀಗಾಗಿ ದಯಮಾಡಿ ಆ ರೀತಿ ತೊಂದರೆಗೆ ಆಸ್ಪದ ಮಾಡಿಕೊಡಬೇಡಿ ಎಂದು ತಹಸೀಲ್ದಾರ್ ಜಾತ್ರಾ ಕಮೀಟಿ ಹಾಗೂ ಗ್ರಾಮದ ಹಿರಿಯರಲ್ಲಿ ಮನವಿ ಮಾಡಿಕೊಂಡರು.
ನಂತರ ಸಿ.ಪಿ.ಐ ಸುನೀಲ್ ಸವದಿ ಮಾತನಾಡಿ ಪ್ರತಿ ವರ್ಷದಂತೆ ಯಾವುದೇ ತರಹದ ರಥ ಕಟ್ಟಲು ಹೋಗಬೇಡಿ ಈ ವರ್ಷದ ಎಲ್ಲಾ ಜಾತ್ರಾ ಮಹೋತ್ಸವಗಳು ಇದೆ ರೀತಿ ನಡೆದಿವೆ. ಮಹಾಮಾರಿ ಕರೋನ ತುಂಬಾ ಭಯಂಕರ ಪರಿಣಾಮ ಬೀರಿದೆ. ಆದ ಕಾರಣ ಈ ಬಗ್ಗೆ ಎಲ್ಲರೂ ಜಾಗೃತರಾಗಿ ಜಾತ್ರೆ ಆಚರಿಸಬೇಕಿದೆ. ನೂರಕ್ಕಿಂತ ಹೆಚ್ಚು ಜನ ಸೇರಿಸಬೇಡಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಕೋವಿಡ್-19 ನಿಯಮ ಪಾಲಿಸುವ ಮೂಲಕ ಆರೋಗ್ಯ ರಕ್ಷಣೆಯ ಜೊತೆಗೆ ಸರಳತೆಯಿಂದ ಜಾತ್ರೆ ಆಚರಿಸಿ ಎಂದು ಹೇಳಿದರು.
ಭಿಮಾಂಬಿಕಾ ದೇವಿಗೆ ರಾಜ್ಯಾದ್ಯಂತ ಭಕ್ತರಿದ್ದಾರೆ. ಹೀಗಾಗಿ ತಾವುಗಳು ಭಕ್ತಾದಿಗಳಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡು ಎಲ್ಲರೂ ತಮ್ಮ ತಮ್ಮ ಮನೆಯಲ್ಲಿಯೇ ತಾಯಿಗೆ ನಮಸ್ಕರಿಸಿ ಬೇಡಿಕೊಳ್ಳಿ ಎನ್ನುವ ಕರಪತ್ರಗಳನ್ನು ಮುದ್ರಿಸಿ ಗ್ರಾಮ ಸೇರಿದಂತೆ ತಾಲೂಕಿನಾದ್ಯಂತ ಹಂಚುವ ಮೂಲಕ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಮದೇವತೆ ಪೂಜಾರಿ ಮಾತನಾಡಿ, ಜಾತ್ರಾ ಮಹೋತ್ಸವದ ಹಿಂದಿನ ಹತ್ತು ದಿನ ಪ್ರತಿನಿತ್ಯ ರಾತ್ರಿ 10 ಘಂಟೆಗೆ ಹುಚ್ಚಯ್ಯನ ಎಳೆಯುತ್ತೇವೆ ಅದರಲ್ಲಿ ಹತ್ತರಿಂದ ಹದಿನೈದು ಜನ ಇರುತ್ತಾರೆ. ಇದಕ್ಕಾದರೂ ಅನುವು ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಅದಕ್ಕೆ ಅಧಿಕಾರಿಗಳು ಒಪ್ಪಿಗೆ ನೀಡಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಲು ಸೂಚಿಸಿದರು.
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಅಭಿಯಂತರ ಪ್ರಕಾಶ ಮೊಂಡಸೊಪ್ಪಿ, ತಾಪಂ ಸದಸ್ಯ ಪ್ರಭು ಮೇಟಿ, ಹಾಗೂ ಇಟಗಿ ಗ್ರಾಮದ ಹಿರಿಯರು ಹಾಗೂ ಧರ್ಮದ ಮಠದ ಪೂಜಾರಿಗಳು ಹಾಜರಿದ್ದರು.