ಔರಂಗಾಬಾದ್ : ಗಡಿ ಹಾಗೂ ಭಾಷೆಯ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ಮಹಾರಾಷ್ಟ್ರದ ಸಚಿವ ಜಯಂತ್ ಪಾಟೀಲ್, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಮರಾಠಿ ಮಾತನಾಡುವ ಕರ್ನಾಟಕ ಗಡಿ ಪ್ರದೇಶಗಳನ್ನು ಸದ್ಯದಲ್ಲಿಯೇ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ.
ಭಾಷಾ ಸೂಕ್ಷ್ಮ ವಿಚಾರದ ಕುರಿತು ಮಾತನಾಡಿರುವ ಅವರು, ಇಂದು ಮರಾಠಾ ಸಹೋದರರಿಗಾಗಿ ರಾಜ್ಯದಲ್ಲಿ ಕರಾಳ ದಿನ ಆಚರಣೆಯಾಗುತ್ತಿದೆ. ಎನ್ ಸಿಪಿ ಕೂಡ ಇದಕ್ಕೆ ಸಾಥ್ ನೀಡಿದೆ. ಈ ಸಂದರ್ಭದಲ್ಲಿ ಪ್ರತಿಭಟನೆಯ ಗುರುತಿಗಾಗಿ ಕಪ್ಪು ರಿಬ್ಬನ್ ಕಟ್ಟಿಕೊಂಡು ಪ್ರತಿಭಟಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕರ್ನಾಟಕದಿಂದ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಮರಾಠಿ ಗಡಿ ನಿವಾಸಿಗಳ ವಿರುದ್ಧದ ಅನ್ಯಾಯ, ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ನಾವು ಸಹಿಸುವುದಿಲ್ಲ. ಈಗಾಗಲೇ ಇಂತಹ ಘಟನೆಗಳ ಕುರಿತು ಎನ್ ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಗಡಿ ಪ್ರದೇಶಗಳಲ್ಲಿ ಸಮಸ್ಯೆಯಲ್ಲಿರುವ ಜನರ ಬೆಂಬಲಕ್ಕೆ ಇಡೀ ಮಹಾರಾಷ್ಟ್ರವೇ ನಿಲ್ಲಲಿದೆ ಎಂದು ಹೇಳಿದ್ದಾರೆ.
ಅವರ ಈ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡಪರ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಿಸುತ್ತವೆ. ಸರ್ಕಾರ ಕೂಡ ವಿರೋಧಿಸಿದೆ.