ನವದೆಹಲಿ: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ಅವರು ಎಸ್ ಐಟಿ ವಿಚಾರಣೆ ಎದುರಿಸಿದ್ದರು. ಈ ಕುರಿತು ಕೇಳಿದ್ದ ಬರೋಬ್ಬರಿ 100 ಪ್ರಶ್ನೆಗಳಿಗೆ 9 ಗಂಟೆಗಳ ಕಾಲ ಉತ್ತರಿಸಿದ್ದಾರೆ. ಈ ಅವಧಿಯಲ್ಲಿ ಟೀ ಕೂಡ ಅವರು ಸೇವಿಸಿರಲಿಲ್ಲ ಎಂದು ತನಿಖೆಯ ತಂಡದಲ್ಲಿದ್ದ ಆರ್.ಕೆ. ರಾಘವನ್ ಹೇಳಿದ್ದಾರೆ.
ಅವರು ತಮ್ಮ ಹೊಸ ಪುಸ್ತಕ ಎ ರೋಡ್ ವೆಲ್ ಟ್ರಾವಲ್ಡ್ ದಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಎಸ್ ಐಟಿ ಅವರು ವಿಚಾರಣೆಗೆ ಕರೆದಾಗ ಮೋದಿ ಅವರು ಗಾಂಧಿನಗರದಲ್ಲಿರುವ ಕಚೇರಿಗೆ ಬಂದಿದ್ದರು. ಬರುವಾಗ ಅವರೇ ಒಂದು ಬಾಟಲ್ ನೀರು ತಂದಿದ್ದರು ಎಂದು ತಿಳಿಸಿದ್ದಾರೆ.
2002ರ ಗುಜರಾತ್ ಹತ್ಯಾಕಾಂಡದ ತನಿಖಾ ತಂಡಕ್ಕೆ ನೇಮಕಗೊಳ್ಳುವ ಮೊದಲು ರಾಘವನ್ ಸಿಬಿಐಯ ನೇತೃತ್ವವನ್ನು ಕೂಡ ವಹಿಸಿದ್ದರು. ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯಗಳ ಮ್ಯಾಚ್ ಫಿಕ್ಸಿಂಗ್, ಮೇವು ಹಗರಣ ಸೇರಿದಂತೆ ಅನೇಕ ವರ್ಷಗಳವರೆಗೆ ಹಲವು ಉನ್ನತ ಮಟ್ಟದ ತನಿಖೆ ನಡೆಸಿದ್ದಾರೆ.
ಬೇರೆಡೆ ವಿಚಾರಣೆ ನಡೆಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಖುದ್ದಾಗಿ ಅವರೇ ಎಸ್ ಐಟಿ ಕಚೇರಿಗೆ ಬರಬೇಕೆಂದು ಹೇಳಿ ಕಳುಹಿಸಲಾಗಿತ್ತು. ಅವರು ನಮ್ಮ ನಿಲುವನ್ನು ಅರ್ಥ ಮಾಡಿಕೊಂಡು ಉತ್ಸಾಹದಿಂದ ಗಾಂಧಿನಗರದಲ್ಲಿರುವ ಎಸ್ ಐಟಿ ಸರ್ಕಾರಿ ಕಚೇರಿಗೆ ಖುದ್ದಾಗಿ ವಿಚಾರಣೆ ಎದುರಿಸಿದ್ದರು. ಈ ವಿಚಾರಣೆಯನ್ನು ತಂಡದ ಸದಸ್ಯ ಅಶೋಕ್ ಮಲ್ಹೋತ್ರಾ ಅವರು ನಡೆಸಿದ್ದರು ಎಂದು ಮಾಜಿ ಪೊಲೀಸ್ ಅಧಿಕಾರಿ ರಾಘವನ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮೋದಿ ಅವರು ಯಾವೊಂದು ಪ್ರಶ್ನೆಗೂ ಉತ್ತರಿಸದೆ ಉಳಿಯಲಿಲ್ಲ. ಪ್ರತಿಕ್ರಿಯೆ ನೀಡುವಾಗ ತಾಳ್ಮೆಯಿಂದ, ಉತ್ಸಾಹದಿಂದಲೇ ವಿವರಿಸುತ್ತಿದ್ದರು. ಮಧ್ಯಾಹ್ನ ಊಟಕ್ಕೆ ವಿರಾಮ ನೀಡಬೇಕೆ ಎಂದು ಕೇಳಿದ್ದಾಗ ಬೇಡವೆಂದಿದ್ದರು. ಅವರೇ ಕುಡಿಯಲು ನೀರು ಬಾಟಲ್ ತಂದಿದ್ದರು. ಒಂದು ಕಪ್ ಚಹ ಕೂಡ ಕುಡಿಯಲಿಲ್ಲ. ಅಷ್ಟು ಶಕ್ತಿ, ಉತ್ಸಾಹ, ಏಕಾಗ್ರತೆ ಇರುವ ವ್ಯಕ್ತಿ ಅವರು ಎಂದು ಹೊಗಳಿದ್ದಾರೆ.