ಬೆಂಗಳೂರು : ಕಾಲೇಜುಗಳನ್ನು ಪ್ರಾರಂಭಿಸಲು ದಿನಾಂಕ ನಿಗದಿ ಪಡಿಸಲಾಗಿದ್ದು, ಪಿಯು ಕಾಲೇಜು ಸದ್ಯಕ್ಕೆ ಆರಂಭ ಆಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ನ. 17ರಿಂದ ಎಲ್ಲ ಪದವಿ ಕಾಲೇಜುಗಳನ್ನು ಆರಂಭ ಮಾಡುವಂತೆ ತೀರ್ಮಾನಿಸಲಾಯಿತು. ಆದರೆ ಸಭೆಯಲ್ಲಿ ಪಿಯು ಕಾಲೇಜು ಆರಂಭದ ಬಗ್ಗೆ ಚರ್ಚೆಯಾಗಿಲ್ಲ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರುವಂತೆ ಒತ್ತಾಯ ಮಾಡುವಂತಿಲ್ಲ. ಇದಕ್ಕೆ ಪೋಷಕರ ಅನುಮತಿ ಕಡ್ಡಾಯವಾಗಿದೆ. ಒತ್ತಡ ಮಾಡುವ ಹಾಗಿಲ್ಲ. ದೀಪಾವಳಿ ಬಳಿಕ ರಾಜ್ಯದಲ್ಲಿ ಪದವಿ ಕಾಲೇಜು ಪ್ರಾರಂಭಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ನ. 17ರಿಂದ ಎಂಜಿನಿಯರಿಂಗ್, ಡಿಪ್ಲೊಮಾ, ಪದವಿ ಕಾಲೇಜು ಪ್ರಾರಂಭ ಮಾಡಲು ನಿರ್ಧಾರ ಮಾಡಲಾಗಿದೆ. ಆದರೆ, ಪಿಯು ಕಾಲೇಜು ಮಾತ್ರ ಸದ್ಯಕ್ಕೆ ಓಪನ್ ಆಗುವುದಿಲ್ಲ. ಕಾಲೇಜಿಗೆ ಬರುವವರಿಗೆ ಇಲಾಖೆ ವ್ಯವಸ್ಥೆ ಮಾಡುತ್ತದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೂ ಅಗತ್ಯ ಮುಂಜಾಗ್ರತಾ ಕ್ರಮದ ವ್ಯವಸ್ಥೆ ಮಾಡುವುದಾಗಿ ನಿರ್ಧರಿಸಲಾಗಿದೆ.
ಪ್ರಾಕ್ಟಿಕಲ್ ತರಗತಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಯುಜಿಸಿ ನಿಯಮದ ಪ್ರಕಾರ ಕಾಲೇಜು ಪ್ರಾರಂಭ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಒತ್ತಾಸೆ ಮೇರೆಗೆ ಕಾಲೇಜು ಪ್ರಾರಂಭ ಮಾಡುವ ನಿರ್ಧಾರ ಸಭೆಯಲ್ಲಿ ಮಾಡಲಾಗಿದೆ.