ಹೈದ್ರಾಬಾದ್ : ಹೈದ್ರಾಬಾದ್ ನಲ್ಲಿ ಮತ್ತೆ ಮಳೆರಾಯ ತನ್ನ ರೌದ್ರನರ್ತನ ಪ್ರಾರಂಭಿಸಿದ್ದು, ಮತ್ತೆ ಇಬ್ಬರನ್ನು ಬಲಿ ಪಡೆದಿದ್ದಾನೆ. ಈ ಮೂಲಕ ಮಹಾಮಳೆಗೆ 50 ಜನ ಬಲಿಯಾದಂತಾಗಿದೆ.
ನಗರದ ಮಲಕ್ ಪೇಟ್ ನಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರೆ, ಆರ್.ಕೆ. ಪಿಇಟಿ ಪ್ರದೇಶದಲ್ಲಿ ಗೋಡೆ ಕುಸಿದ ಪರಿಣಾಮ 5 ವರ್ಷದ ಮಗು ಪ್ರಾಣ ಬಿಟ್ಟಿದೆ. ಇಲ್ಲಿಯವರೆಗೂ ಮಳೆಯ ಅವಂತಾರಕ್ಕೆ ಸುಮಾರು 50 ಜನ ಪ್ರಾಣ ಬಿಟ್ಟಂತಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಲ್ಲಿ ನೀರು ಸಂಪೂರ್ಣವಾಗಿ ನಿಂತಿದೆ. ಹೀಗಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಡಿಆರ್ ಎಫ್ ತಂಡಗಳು ನಿರಂತರವಾಗಿ ನೀರು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿವೆ. ಬಾಲಾಪುರ್ ಕೆರೆಯ ಕಟ್ಟೆ ಒಡೆದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಬಂದೋದಗಿದೆ. ಸದ್ಯ ಮಳೆಯಿಂದಾಗಿ ಉಂಟಾದ ಹಾನಿಯ ಕುರಿತು ಸರ್ಕಾರ ಲೆಕ್ಕ ಹಾಕುತ್ತಿದ್ದು, ಇಲ್ಲಿಯವರೆಗೂ ರೂ. 50 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಹಫೀಜ್ ಬಾಬಾ ನಗರ್, ಫೂಲ್ಬಾಗ್, ಉಮರ್ ಕಾಲೋನಿ, ಇಂದಿರಾ ನಗರ್, ಶಿವಾಜಿ ನಗರ್, ರಾಜೀವ್ ನಗರ್ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲು ಪೊಲೀಸರು ಮುಂದಾಗಿದ್ದಾರೆ.