ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಕೆಲವು ದಿನಗಳಿಂದ ಮಳೆಯ ಪ್ರಮಾಣ ತಗ್ಗಿದ್ದರೂ ಪ್ರವಾಹ ಭೀತಿ ಇನ್ನೂ ಕಡಿಮೆಯಾಗಿಲ್ಲ.
ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ಅಷ್ಟೆ ಅಲ್ಲದೆ, ಇನ್ನಷ್ಟು ಗ್ರಾಮಗಳಿಗೆ ಹೊಸದಾಗಿ ಪ್ರವಾಹ ಭೀತಿ ಎದುರಾಗಿದೆ. ಹಲವು ರಸ್ತೆಗಳ ಸಂಪರ್ಕ ಕಡಿತವಾಗಿದೆ. ಭೀಮಾ ನದಿಯ ಪ್ರವಾಹಕ್ಕೆ ಯಾದಗಿರಿಯ ಜೋಳದಡಗಿ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿ ಅಪಾಯ ಮಟ್ಟ ಮೀರಿದೆ. ಇದರಿಂದಾಗಿ ರಾಯಚೂರು ಮತ್ತು ಯಾದಗಿರಿ ಸಂಪರ್ಕ ಬಂದ್ ಆಗಿದೆ.
ಕೃಷ್ಣಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಹಲವು ಗ್ರಾಮಗಳು ಮುಳುಗಡೆಯಾಗಿವೆ. ಭೀಮಾ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುತ್ತಿರುವುದರಿಂದಾಗಿ ರಾಯಚೂರಿನ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಕಲಬುರ್ಗಿಯ ಸೊನ್ನ ಬ್ಯಾರೇಜ್ ನಿಂದ 8 ಲಕ್ಷ ಕ್ಯೂಸೆಕ್ ನೀರು ಹರಿಸಿರುವುದರಿಂದಾಗಿ ಕೃಷ್ಣ ನದಿ ಪಾತ್ರದ 17 ಗ್ರಾಮಗಳ ಜನ ಆತಂಕದಲ್ಲಿದ್ದಾರೆ. ಹೀಗಾಗಿ ಈ ಎಲ್ಲ 17 ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ತಾವರಖೇಡ ಗ್ರಾಮವೂ ಜಲಾವೃತಗೊಂಡಿದೆ. ಭೀಮಾನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತೀರದ ಜನರೇ ಸ್ವಯಂ ಪ್ರೇರಣೆಯಿಂದ ಅಪಾಯದ ಮಟ್ಟ ಅರಿತು ಸ್ಥಳಾಂತರವಾಗುತ್ತಿದ್ದಾರೆ. ಅಪಾರ ಪ್ರಮಾಣದ ದವಸ, ಧಾನ್ಯ, ಮನೆಗಳು ನೀರಿಗೆ ಆಪೋಸನವಾಗಿವೆ. ಜಾನುವಾರಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ.