ಜುಲೈ 1 ರಿಂದ ಜುಲೈ 25ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಪಾಸಿಟಿವ್ ಸಂಖ್ಯೆ 8 ಪಟ್ಟು ಹೆಚ್ಚಿದ್ದು, ಔಷಧಿ, ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆಯಿದೆ.

ಬೆಂಗಳೂರು: ರಾಜ್ಯದಲ್ಲಿ ಪ್ರತಿದಿನ ದಾಖಲಾಗುತ್ತಿರುವ ಪಾಸಿಟಿವ್ ಪ್ರಕರಣಗಳಲ್ಲಿ ಅರ್ಧದಷ್ಟು ಕೇಸುಗಳು ಬೆಂಗಳೂರು ಜಿಲ್ಲೆಗೆ ಸಂಬಂಧಿಸಿದ ಕೇಸುಗಳಾಗಿವೆ.

ಈ ತಿಂಗಳ ಆರಂಭದಲ್ಲಿ ಇತರ ಮಹಾನಗರಗಳಿಗೆ ಹೋಲಿಸಿದಾಗ, ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣದಲ್ಲಿತ್ತು. ಆದರೆ ನಂತರ ಕೇಸುಗಳ ಸಂಖ್ಯೆ ಹೆಚ್ಚುತ್ತಲೇ ಹೋಗಿತು.

ಜುಲೈ 1 ರಂದು ಸೋಂಕಿತರ ಸಂಖ್ಯೆ 5,290 ಇದ್ದುದು, ಜುಲೈ 25ರಂದು 43,513 ಕ್ಕೆ ತಲುಪಿದೆ. ಅಂದರೆ ಎಂಟು ಪಟ್ಟು ಏರಿಕೆಯಾಗಿದೆ. ಜುಲೈ 1 ರಂದು ಕೋವಿಡ್ ಸಾವಿನ ಸಂಖ್ಯೆ 97 ಇತ್ತು. ಜುಲೈ 25ರಂದು 9 ಪಟ್ಟು ಹೆಚ್ಚಿ 862ಕ್ಕೆ ತಲುಪಿದೆ.

ರಾಜ್ಯದಲ್ಲಿ ದಾಖಲಾದ ಪಾಸಿಟಿವ್ ಕೇಸುಗಳು ಮತ್ತು ಕೋವಿಡ್ ಸಾವುಗಳ ಪೈಕಿ ಶೇ. 47 ಬೆಂಗಳೂರಿನಲ್ಲೇ ಸಂಭವಿಸಿವೆ.

 ಪಾಸಿಟಿವ್ ಸಂಖ್ಯೆ ಕೋವಿಡ್ ಸಾವು
ಜುಲೈ 1     5,290       97
ಜುಲೈ 25   43,503     862
25 ದಿನದಲ್ಲಿ ಹೆಚ್ಚಳ   38,213     765
ಹೆಚ್ಚಳದ ಪ್ರಮಾಣ    8 ಪಟ್ಟು      9 ಪಟ್ಟು

ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಕೋವಿಡ್ ಆರೈಕೆಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿಲ್ಲ. ಸರ್ಕಾರದ ವಿಕ್ಟೋರಿಯಾ ಆಸ್ಪತ್ರೆಯೇ ಪ್ರಮುಖ ಕೋವಿಡ್ ಆಸ್ಪತ್ರೆಯಾಗಿದೆ. ಆದರೆ, ಕೇಸುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆ ಕಾಣುತ್ತಿದೆ. ಚಿಕಿತ್ಸೆಗೆ ಅಗತ್ಯವಾದ ಔಷಧಿಗಳ ಕೊರತೆಯೂ ಚಿಕಿತ್ಸೆಗೆ ಹಿನ್ನಡೆ ಮಾಡಿದೆ.

‘ಇತರ ಕಾಯಿಲೆ ಇರುವ ಕೋವಿಡ್ ರೋಗಿಗಳು ತಡವಾಗಿ ಆಸ್ಪತ್ರೆಗೆ ಸೇರುತ್ತಿರುವುದರಿಂದ ವೆಂಟಿಲೇಟರ್ಗಳ ಅವಶ್ಯಕತೆಯಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ವೆಂಟಿಲೇಟರ್ ಲಭ್ಯವಿಲ್ಲ’

-ಡಾ. ಜಗದೀಶ್ ಹಿರೇಮಠ, ಏಸ್ ಆಸ್ಪತ್ರೆ, ಜಿಗಣಿ, ಬೆಂಗಳೂರು

ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಡಾ. ಮಹೇಶ್ ಮೈಲಾರಪ್ಪ, ‘ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಜನರು ಆಸ್ಪತ್ರೆಗೆ ಬರುತ್ತಿಲ್ಲ. ಕ್ವಾರಂಟೈನ್ಗೆ ಒಳಪಡಲು ಹಿಂದೇಟು ಹಾಕುತ್ತಾರೆ. ನಂತರ ತ್ರಾಸು ಆದಾಗ ಒಮ್ಮೆಲೇ ಆಸ್ಪತ್ರೆಗೆ ಧಾವಿಸುವುದರಿಂದ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ’ ಎಂದು ಹೇಳುತ್ತಾರೆ.

ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ರೆಮೆಡ್ಸೆವಿರ್ ಮಾತ್ರೆಗಳ ಕೊರತೆಯೂ ಒಂದು ಸಮಸ್ಯೆಯಾಗಿದೆ. ಫಾರ್ಮಾ ಕಂಪನಿಗಳಿಗೆ ಆರ್ಡರ್ ಮಾಡಿದರೆ ಒಂದು ಅಥವಾ ಎರಡು ವಾರದ ನಂತರ ಪೂರೈಕೆಯಾಗುತ್ತಿದೆ ಎಂದು ಕೆಲವರು ವೈದ್ಯರು ಹೇಳುತ್ತಿದ್ದಾರೆ. ರೆಮೆಡ್ಸೆವಿರ್ ಮಾತ್ರೆಯನ್ನು ಬ್ಲಾಕ್ ಮಾರ್ಕೆಟಿನಲ್ಲಿ ಮಾರುತ್ತಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ. ಆರೋಗ್ಯ ಮತ್ತು ಪೊಲೀಸ್ ಇಲಾಖೆ ಈ ಕುರಿತಂತೆ ಯಾವುದೇ ಕ್ರಮಗಳಿಗೆ ಮುಂದಾಗುತ್ತಿಲ್ಲ.

 ಸಮುದಾಯ ಹರಡುವಿಕೆ?

‘ಯಾವುದೇ ಸೋಂಕಿತರ ಸಂಪರ್ಕವಿಲ್ಲದ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಮುದಾಯಿಕವಾಗಿ ಸೋಂಕು ಹರಡಿದ್ದಕ್ಕೆ ಸಾಕ್ಷಿ. ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಇದು ಸಂಭವಿಸುತ್ತಿದೆ’ ಎನ್ನುತ್ತಾರೆ ಡಾ. ಜಗದೀಶ್ ಹಿರೇಮಠ.

ಸರ್ಕಾರ ಸೋಮಾರಿತನದ ಸೋಂಕಿನಿಂದ ಹೊರಬಂದು ಆರೋಗ್ಯ ವ್ಯವಸ್ಥೆಯನ್ನು ಸರಿ ಮಾಡಬೇಕಿದೆ.

Leave a Reply

Your email address will not be published. Required fields are marked *

You May Also Like

ಎಷ್ಟೆ ಕಷ್ಟ ಬಂದ್ರು ಬಲ್ದೋಟ ಹುನ್ನಾರ ಫಲಿಸಲು ಬಿಡಲ್ಲ: ಎಸ್.ಆರ್.ಹಿರೇಮಠ

ಗದಗ: ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಎಷ್ಟೆ ಕಷ್ಟ ಬಂದ್ರು ಬಲ್ದೋಟ ಹುನ್ನಾರ ಫಲಿಸಲು ಬಿಡುವುದಿಲ್ಲ…

ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವವರ ಮೇಲೆ ಕ್ರಮಕ್ಕೆ ಗದಗ ಡಿಸಿ ಸೂಚನೆ!

ವಾಕರಾರಸಾ ಸಂಸ್ಥೆಯ ನಿರ್ವಾಹಕರು ಹಾಗೂ ಚಾಲಕರು ಮತ್ತು ಸಿಬ್ಬಂದಿಗಳು ನೀಡಿದ ಅನಿರ್ದಿಷ್ಟಾವಧಿ ಮುಷ್ಕರದಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಕನಿಷ್ಟ ದರದಲ್ಲಿ ಸಾರಿಗೆ ಸೇವೆ ಒದಗಿಸಲು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.