ಶ್ರೀನಗರ : ಉಗ್ರರಿಂದ ಬಿಜೆಪಿ ನಾಯಕನನ್ನು ರಕ್ಷಿಸಿ ಪೊಲೀಸ್ ಪೇದೆ ಮೊಹಮ್ಮದ್ ಅಲ್ತಾಫ್ ಹುಸೈನ್ ಹುತಾತ್ಮರಾಗಿದ್ದಾರೆ.
ಬಿಜೆಪಿ ನಾಯಕ ಗುಲಾಮ್ ಖಾದೀರ್ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಕಂಗನ್ ನಗರಕ್ಕೆ ಹೊರಟಿದ್ದ ಸಂದರ್ಭದಲ್ಲಿ ಅವರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಭದ್ರತಾ ಪಡೆಯಲ್ಲಿದ್ದ ಮೊಹಮ್ಮದ್ ಅವರನ್ನು ರಕ್ಷಿಸಿ ಹುತಾತ್ಮರಾಗಿದ್ದಾರೆ.
ಬಿಜೆಪಿ ನಾಯಕ ಖಾದೀರ್ ಅವರ ರಕ್ಷಣೆಗಾಗಿ ಇದ್ದ ಪೊಲೀಸ್ ತಂಡದಲ್ಲಿ ಮೊಹಮ್ಮದ್ ಕೂಡ ಇದ್ದರು. ಉಗ್ರರು ದಾಳಿ ನಡೆಸುತ್ತಿದ್ದಂತೆ ಪೊಲೀಸರು ಕೂಡ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಗೆ ಹೆದರದ ಮೊಹಮ್ಮದ್ ಅಲ್ತಾಫ್ ಓರ್ವ ಉಗ್ರನನ್ನು ಬಲಿ ಪಡೆದು ತಾವು ಬಲಿಯಾಗಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೊಹಮ್ಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಹುತಾತ್ಮರಾಗಿದ್ದಾರೆ.
ಮೃತ ಉಗ್ರನನ್ನು ಪುಲ್ವಾಮದ ಶಬ್ಬೀರ್ ಎಂದು ಗುರುತಿಸಲಾಗಿದೆ. ಮೊಹಮ್ಮದ್ ಅಲ್ತಾಫ್ ಶ್ರೀನಗರ ನಿವಾಸಿಯಾಗಿದ್ದಾರೆ. ಇವರು ಕಳೆದ 9 ವರ್ಷಗಳ ಹಿಂದೆಯೇ ಪೊಲೀಸ್ ಆಗಿದ್ದರು. ಮೂರು ತಿಂಗಳಿಂದ ಇವರನ್ನು ಖಾದಿರ್ ಅವರ ಭದ್ರತಾ ಸಿಬ್ಬಂದಿಯಾಗಿ ನೇಮಕ ಮಾಡಲಾಗಿತ್ತು. ಇವರಿಗೆ ಪತ್ನಿ, ತಂದೆ – ತಾಯಿ ಹಾಗೂ ಒಂದು ವರ್ಷದ ಮಗು ಇದೆ.