ಲಕ್ಷ್ಮೇಶ್ವರ: ಕೊರೋನಾ ಎರಡನೇ ಅಲೆ ಅತೀ ವೇಗವಾಗಿ ಹರಡುತ್ತಿರುವುದರಿಂದ ಶನಿವಾರ, ಭಾನುವಾರ ಸರಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂ ಅನ್ನು ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.
ಇನ್ನು ಬಹುತೇಕರು ಇದಕ್ಕೆ ಸಹಕಾರ ನೀಡಿದ್ದು ಕೂಡ ವಿಶೇಷವಾಗಿತ್ತು. ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು ಈ ಹಿನ್ನಲೆಯಲ್ಲಿ ಪೊಲೀಸ್ ಹಾಗು ಆರೋಗ್ಯ ಇಲಾಖೆ ಪುರಸಭೆಯವರು ಸಾಕಷ್ಟು ಜಾಗೃತಿಗೂ ಮುಂದಾಗಿದ್ದಾರೆ.
ಶನಿವಾರ ಹಾಗು ಭಾನುವಾರ ಕರ್ಫ್ಯೂ ಜಾರಿಯಲ್ಲಿದ್ದರೂ ಕೆಲವರು ಓಡಾಡುತ್ತಿದ್ದರು. ಅಂಥವರಿಗೆ ಸಿ.ಪಿ.ಐ ವಿಕಾಸ ಲಮಾಣಿ ಹಾಗೂ ಪಿಎಸ್ಐ ಶಿವಯೋಗಿ ಲೋಹಾರ ಬಿಸಿಮುಟ್ಟಿಸಿದರು. ಬೇಕಾಬಿಟ್ಟಿ ಓಡಾಡುವ ಜನ ಹಾಗು ವಾಹನಗಳನ್ನು ವಶಕ್ಕೆ ಪಡೆದುಕೊಂಡರು. ಶುಕ್ರವಾರ ರಾತ್ರಿ 9 ಗಂಟೆಯಿಂದ ಕರ್ಫ್ಯೂ ಜಾರಿ ಮಾಡಲಾಗಿದ್ದು ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಪಟ್ಟಣದ ಎಲ್ಲಾ ವ್ಯಾಪಾರ ಮುಗ್ಗಟ್ಟು ಬಂದವಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
ಲಕ್ಷ್ಮೇಶ್ವರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ನೀಡಲಾಗಿದ್ದು, ಮಾರುಕಟ್ಟೆ, ಶಿಗ್ಲಿ ಕ್ರಾಸ್, ಪಾದಕಟ್ಟಿ ಸೇರಿದಂತೆ ಅನೇಕ ಕಡೆಗಳಲ್ಲಿ ಪೌರಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.