ವರದಿ: ವಿಠಲ ಕೆಳೂತ್
ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ ಮಾಡಿ, ಸಂವಿಧಾನಕ್ಕೆ ಅಗೌರವ ತೋರಿದ ರಾಯಚೂರಿನ ಜಿಲ್ಲಾ ಮುಖ್ಯ ನ್ಯಾಯಾದೀಶ ಮಲ್ಲಿಕಾರ್ಜುನ ಗೌಡ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಇಲ್ಲಿನ ದಲಿತ ಸಂರಕ್ಷಣೆ ಒಕ್ಕೂಟದ ವತಿಯಿಂದ ಜ.28 ರಂದು ರಾಜ್ಯ ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ಮಾಡಲಾಗುವುದು ಎಂದು ಹೋರಾಟಗಾರ ದೊಡ್ಡಪ್ಪ ಮುರಾರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 73ನೇ ಗಣರಾಜ್ಯೋತ್ಸವ ದ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿ, ತಾವೇ ಸ್ವತಃ ಅಂಬೇಡ್ಕರ್ ಪೋಟೋ ತಗೆದಿಟ್ಟು ಸಂವಿಧಾನಕ್ಕೆ ಅಗೌರವ ತೋರಿದ ರಾಯಚೂರಿನ ಜಿಲ್ಲಾ ನ್ಯಾಯಾದೀಶನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
ಕಾನೂನು ಪದವಿ ಪಡೆದುಕೊಂಡು ಜಿಲ್ಲೆಯ ಜನತೆಗೆ ನ್ಯಾಯ ಒದಗಿಸುವ ಒಬ್ಬ ಜಿಲ್ಲಾ ನ್ಯಾಯದೀಶನಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಗೌರವ ಇಲ್ಲದಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ.
ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕೆಂದು ರಾಜ್ಯ ಸರ್ಕಾರ ಆದೇಶ ನೀಡಿದ್ದು, ಮನುವಾದ ಬುದ್ದಿ ಹೊಂದಿರುವ ಈ ನ್ಯಾಯದೀಶನಿಗೆ ಅರಿ ಇಲ್ಲವೇ ಎಂದು ಖಾರವಾಗಿ ಹೇಳಿದರು.
ಅಸ್ಪೃಶ್ಯತೆ ಬಗ್ಗೆ ಕೀಳು ಮನೋಭಾವನೆ ಹೊಂದಿರುವ ಜಿಲ್ಲಾ ನ್ಯಾಯಾದೀಶ ಮಲ್ಲಿಕಾರ್ಜುನಗೌಡನ ಮೇಲೆ ದೇಶ ದ್ರೋಹ ಪ್ರಕರಣವನ್ನು ದಾಖಲೀಸಬೇಕು. ಉಚ್ಚ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ವೃತ್ತಿಯಿಂದ ವಜಾ ಮಾಡಿ ಜೈಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಮಸ್ಕಿಯ ಹಳೇ ಬಸ್ ನಿಲ್ದಾಣದ ಹತ್ತಿರದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂದೆ ರಾಜ್ಯ ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ಮಾಡಲಾಗುವುದು. ಸಂವಿಧಾನದ ಬಗ್ಗೆ ಗೌರವ ಇರುವ ಪ್ರತಿಯೊಬ್ಬ ನಾಗರೀಕ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಸಾಹಿತಿ ದಾನಪ್ಪ ನಿಲೋಗಲ್ಲ,ಮಲ್ಲಯ್ಯ ಬುಳ್ಳಾ, ಹನುಮಂತಪ್ಪ ವೆಂಕಟಾಪೂರ, ಮೌನೇಶ ಮುರಾರಿ, ದೊಡ್ಡ ಕರಿಯಪ್ಪ, ಬಾಲಸ್ವಾಮಿ ಜಿನ್ನಾಪೂರ, ದುರ್ಗಾಪ್ರಸಾದ ತೋರಣದಿನ್ನಿ, ಅಶೋಕ ಮುರಾರಿ, ದುರ್ಗರಾಜ ವಟಗಲ್ಲ ಸೇರಿದಂತೆ ಇನ್ನಿತರರು ಉಪಸ್ಥಿತಿರಿದ್ದರು.