ಲಕ್ಷ್ಮೇಶ್ವರ:
ಅಕಾಲಿಕ ಮಳೆ ಹಾಗೂ ಸಾಲದ ಹೊರೆ ತಾಲೂಕಿನಲ್ಲಿ ರೈತರೊಬ್ಬರ ಜೀವ ತೆಗೆದಿದೆ. ಬೆಳೆದ ಬೆಳೆ ಕಣ್ಣೆದುರೇ ಹಾಳಾಗಿದ್ದನ್ನು ಕಂಡ ರೈತ ಮುಂದೆ ಜೀವನ ಹೇಗೆ, ಬ್ಯಾಂಕಿನ ಸಾಲ ಹೇಗೆ ತಿರಿಸೊದು ಎಂದು ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ದೊಡ್ಡೂರ ಗ್ರಾಮದ ಜಗದೀಶ ಚನ್ನಬಸಪ್ಪ ಬಾಗಲದ (52) ಆತ್ಮಹತ್ಯೆ ಮಾಡಿಕೊಂಡ ರೈತ. ಅವರು ತಮ್ಮ ಹೊಲದಲ್ಲಿ ಕಷ್ಟಪಟ್ಟು ಬೆಳೆ ಬೆಳೆದಿದ್ದರು. ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಬೆಳೆಗಳು ನಾಶವಾಗಿದ್ದವು. ಬೆಳೆ ಹಾಳಾಗಿದ್ದರಿಂದ ಹಾಗೂ ತಾಲೂಕಿನ ಶಿಗ್ಲಿ ಗ್ರಾಮದ ಕೇನೆರಾ ಬ್ಯಾಂಕ್ ನಲ್ಲಿ 2 ಲಕ್ಷ 65 ಸಾವಿರ ರೂಪಾಯಿ ಸಾಲ ಮಾಡಿದ್ದ ರೈತ ಮಾನಸಿಕವಾಗಿ ತೀವ್ರ ನೊಂದಿದ್ದರು ಎನ್ನಲಾಗುತ್ತಿದೆ. ಸಾಲಭಾದೆಯಿಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
