ಗದಗ: ಕೊರೊನಾದ ಸಂಕಷ್ಟದ ದಿನಗಳು ಕೇವಲ ಬಡ ಜನರಿಗಷ್ಟೆ ಅಲ್ಲದೇ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾರಣದಿಂದ ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಅದರಲ್ಲೂ ತುತ್ತಿನ ಚೀಲ ತುಂಬಿಕೊಳ್ಳಲು ದಿನದ ದುಡಿಮೆಯನ್ನೇ ನಂಬಿಕೊಂಡಿರುವವರ ಪಾಡಂತೂ ಹೇಳತೀರದು. ಇದೆಲ್ಲದಕ್ಕಿಂತ ಮುಖ್ಯವಾಗಿ ಅದೆಷ್ಟೋ ವೃದ್ಧರು, ವಿಕಲಚೇತನರು, ವಿದವೆಯರು ಮಾಶಾಸನವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಅಂತಹವರ ಪಾಡಂತೂ ಹೇಳತೀರದು. ಗದಗ ನಗರದಲ್ಲಿ ವೃದ್ಧೆಯೊಬ್ಬರು ಮಾಶಾಸನ ಪಡೆಯಲು ಎರಡು ಕಿಲೋಮೀಟರ್ ವರೆಗೆ ನಡೆದುಕೊಂಡು ಬಂದ ಘಟನೆ ನಡೆಯಿತು.
ಇಲ್ಲಿನ ಭಜಂತ್ರಿ ನಗರದ ಅಜ್ಜಿ ಯಲ್ಲವ್ವ ಭಜಂತ್ರಿ, ಮಾಶಾಸನ ಪಡೆಯಲು ನಡೆದು ಬಂದ ಅಜ್ಜಿಯ ಮಾತು ಕೇಳಿದರೆ ಕರಳು ಚುರ್ ಎನ್ನುತ್ತೆ. ಅಯ್ಯೋ ವಿಧಿಯೇ ಈ ಕೊರೊನಾದಿಂದ ಈ ಕಣ್ಣುಗಳಿಂದ ಇನ್ನು ಏನೇನು ನೋಡಬೇಕು ಎಂದೆನಿಸದೇ ಇರಲಾರದು. ಈಗಾಗಲೇ ಲಾಕ್ ಡೌನ್ ನಿಂದ ಅಜ್ಜಿ ಆರ್ಥಿಕವಾಗಿ ತೀರಾ ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ವಾಹನ ವ್ಯವಸ್ಥೆ ಇಲ್ಲದ ಕಾರಣ ಅಜ್ಜಿಯೊಬ್ಬರು ಪೋಸ್ಟ್ ಆಫೀಸಿಗೆ ಎರಡು ಕಿ.ಮೀ ನಡೆದುಕೊಂಡೇ ಬಂದಿದ್ದು ಮಾತ್ರ ಇಂಥ ಅದೆಷ್ಟೋ ಜನರ ಸಂಕಷ್ಟ ಒಂದು ಕ್ಷಣ ಕಣ್ಣ ಮುಂದೆ ಕಟ್ಟಿತು.
ನಗರದ ಹಳೇ ಡಿಸಿ ಆಫೀಸ್ ಸರ್ಕಲ್ ಬಳಿ ಪೊಲೀಸರು ಅಜ್ಜಿಯನ್ನು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿತು. ಅಜ್ಜಿ ಹೊರ ಬಂದ ಕಾರಣ ಕೇಳಿದ ಪೊಲೀಸರು, ಪೋಸ್ಟ್ ಆಫೀಸ್ ಬಂದ್ ಇರುವ ಬಗ್ಗೆ ತಿಳಿಸಿದರು. ಪಾಪ ಅಜ್ಜಿ ಬಂದ ದಾರಿಗೆ ಸುಂಕುವಿಲ್ಲ ಎನ್ನವಂತೆ ಮನೆಗೆ ಮರಳಿದರು.
ಪಾಪ ಒಂದೆಡೆ ಅಜ್ಜಿಗೆ ಕಿವಿ ಕೇಳುವುದಿಲ್ಲ, ಮತ್ತೊಂದೆಡೆ ದಿನದೂಡಲು ಕೈ ಬರಿದಾಗಿವೆ. ಮಗದೊಂದೆಡೆ ಲಾಕ್ ಡೌನ್ ಇಂಥ ಅದೆಷ್ಟೋ ಅಜ್ಜ, ಅಜ್ಜಿಯರು, ತಾಯಂದಿರು, ವಿಧವೆಯರು, ವಿಕಲಚೇತನರು ಈ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥವರಿಗೆ ಕೊರೊನಾ ಶಾಪವಾಗಿದೆ.
ಗದಗನಲ್ಲಿ ಮಾಶಾಸನ ಪಡೆಯಲು ಎರಡು ಕಿಲೋಮಿಟರ್ ನಡೆದು ಬಂದ ಅಜ್ಜಿ

