ಉಡುಪಿ: ಈಗಾಗಲೇ ಲಾಕ್ ಡೌನ್ ಸಡಿಲಿಗೊಳಿಸಿ ಬೇರೆ ಜಿಲ್ಲೆ ಹಾಗೂ ರಾಜ್ಯದಲ್ಲಿರುವ ಕಾರ್ಮಿಕರನ್ನು ತವರಿಗೆ ಕರೆತರುವ ಬಗ್ಗೆ ಸರ್ಕಾರ ಆದೇಶ ನೀಡಿದೆ.
ಕಾರ್ಮಿಕರಿಗೆ ನಿಗದಿತ ದರದಲ್ಲಿ ಊರು ಸೇರಿಸಬೇಕು ಎನ್ನುವ ನಿಯಮವಿದೆ. ಆದರೆ ಉಡುಪಿಯಲ್ಲಿ ಮಾತ್ರ ಗದಗ ಜಿಲ್ಲೆಯ ಕಾರ್ಮಿಕರು ಊರು ಸೇರಲು ಪರದಾಡುವಂತಾಗಿದೆ. ಈಗಾಗಲೇ ಒಂದುವರೆ ತಿಂಗಳಿಂದ ಕೆಲಸವಿಲ್ಲದೇ ಕಾರ್ಮಿಕರು ಒಪ್ಪತ್ತಿನೂಟಕ್ಕೂ ಪರದಾಡುವಂತಾಗಿದೆ. ಇಂಥ ಸಂದರ್ಭದಲ್ಲಿ ಸಾವಿರಾರು ಹಣ ವಸೂಲಿ ಮಾಡುತ್ತಿರುವುದು ಕಾರ್ಮಿಕರಿಗೆ ತೀವ್ರ ಸಂಕಷ್ಟಕ್ಕೀಡು ಮಾಡಿದೆ.
ಉಡುಪಿಯಿಂದ ಗಜೇಂದ್ರಗಡಕ್ಕೆ ಬರಲು 1500 ಹಣ ಪಡೆಯಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ. ಇಂತಹ ಸಂದಿಗ್ಧತೆಯಲ್ಲಿ ತುತ್ತಿನ ಚೀಲ ತುಂಬಿಕೊಳ್ಳಲು ಪರದಾಡಬೇಕಾದ ಕಾರ್ಮಿಕರು ಅದು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಕೊಡುವುದು ಹೇಗೆ? ಎಂಬ ಪ್ರಶ್ನೆ ಉದ್ಭವವಾಗಿದೆ.
ಇಡೀ ದೇಶವೇ ಈಗ ಸಂಕಷ್ಟದಲ್ಲಿದೆ. ಮದ್ಯಮ ಹಾಗೂ ಬಡ ಕುಟುಂಬಗಳು ಸ್ಥಿತಿ ಹೇಳತೀರದಾಗಿದೆ. ಇಂಥ ಪರಿಸ್ಥಿತಿಯಲ್ಲಿ ಒಪ್ಪತ್ತಿನೂಟಕ್ಕೆ ದುಡಿಮೆಯನ್ನೆ ನಂಬಿರುವ ಬಡ ಕಾರ್ಮಿಕರು ಊರು ಸೇರುವುದು ಹೇಗೆ? ಹಣದ ತೊಂದರೆಯಿಂದಾಗಿ ಜನ ತಮ್ಮ ಊರು ತಲುಪುವುದು ಕಷ್ಟವಾಗಿದೆ. ಕೂಡಲೇ ಅಧಿಕಾರಿಗಳು ಸಂಕಷ್ಟದಲ್ಲಿರುವ ಕಾರ್ಮಿಕರ ನೋವಿಗೆ ಸ್ಪಂದಿಸಿ ಅವರನ್ನು ಊರು ತಲುಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಅಶೋಕ ಲಮಾಣಿ ಒತ್ತಾಯಿಸಿದ್ದಾರೆ.
ಈಗಾಗಲೇ ಹೊಗಿ-ಬರುವ ಬಸ್ ದರ ಸೇರಿ 1000 ರೂ ಆಗುತ್ತದೆ. ಆದರೆ 1500 ಏಕೆ? ಎನ್ನುವುದು ಕಾರ್ಮಿಕರ ಪ್ರಶ್ನೆ. ಇನ್ನು ಮುಖ್ಯವಾಗಿ ಇಂಥ ಪರಿಸ್ಥಿತಿಯಲ್ಲಿ ಒಬ್ಬ ಕಾರ್ಮಿಕ ಊರು ಸೇರಲು ಹೋಗಿ-ಬರುವ ದರವನ್ನು ಪಾವತಿಸಬೇಕು ಎಂದರೆ ಕಷ್ಟ ಸಾಧ್ಯವೆ ಸರಿ?. ಇದರಿಂದಾಗಿ ನೂರಾರು ಕಾರ್ಮಿಕರು ಊರು ಸೇರುವುದು ಹೇಗೆ? ಎನ್ನುವ ಚಿಂತೆಯಲ್ಲಿದ್ದಾರೆ. ಕೂಡಲೇ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ದುಡಿಯುವ ವರ್ಗದ ನೆರವಿಗೆ ಧಾವಿಸಬೇಕಾದ ಅನಿವಾರ್ಯತೆ ಇದೆ.