ಗದಗ: ಈಗಾಗಲೇ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಕೊರೊನಾ ನಿಯಂತ್ರಣ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರ ಬೇಕು. ಈಗಾಗಲೇ ಜಿಲ್ಲೆಯಲ್ಲಿಯೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಹೀಗೆ ಮುಂದುವರೆದರೆ ಪೊಲೀಸ್ ಬಲ ಪ್ರಯೋಗ ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಅವರು ಸೋಮವಾರ ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಪೊಲೀಸ್ ಇಲಾಖೆ ಬಲಪ್ರಯೋಗವೇ ಅಂತಿಮವಲ್ಲ. ಆದರೆ ಅನಿವಾರ್ಯವಾದಾಗ ಬೇರೆ ದಾರಿ ಇಲ್ಲ. ಆದರೆ ಈ ಬಗ್ಗೆ ನೀವೇ ಕೇಳುತ್ತಿರಿ ಒಂದು ವೇಳೆ ಪೊಲೀಸ್ ಬಲ ಪ್ರಯೋಗ ಮಾಡಿದರೆ ನೀವೇ ಅದನ್ನು ಟಿವಿಯಲ್ಲಿ ತೋರಿಸುತ್ತೀರಿ ಎಂದು ಪ್ರತಿಕ್ರಿಯಿಸಿದರು.
ನಾಗರಿಕರ ಜೀವ ರಕ್ಷಣೆಗೆ ಸರ್ಕಾರ ಪ್ರಯತ್ನಿಸುತ್ತಿದೆ. ಹೀಗಾಗಿ ತೀರಾ ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಗೆ ಬನ್ನಿ. ಜೀವನ ನಿರ್ವಹಣೆಗೆ ಬೇಕಾದ ದಿನಸಿಗಳನ್ನು ಎರ್ಡ್ಮೂರು ದಿನಕ್ಕೊಮ್ಮೆ ಖರೀದಿಸಿ, ಕಡ್ಡಾಯವಾಗಿ ಮಾಸ್ಕ್ ಬಳಸಿ, ಈಗಾಗಲೇ ಈ ಬಗ್ಗೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ ಎಂದರು.
ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕೆಲವು ಮುಂಜಾಗೃತ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುತ್ತೇನೆ. ಧ್ವನಿ ವರ್ಧಕದ ಮೂಲಕ ಕೊರೊನಾ ಜಾಗೃತಿ ಮೂಡಿಸುವ ಬಗ್ಗೆ ಸೂಚಿಸುತ್ತೇನೆ. ಸಂಬಂಧ ಪಟ್ಟ ಇಲಾಖೆ ಕೋವಿಡ್ ಪರೀಕ್ಷೆಗಳು ಗರೀಷ್ಟ ಮಟ್ಟದಲ್ಲಾಗುವಂತೆ ಸೂಚಿಸುತ್ತೇನೆ.
ಪ್ರತಿಯೊಬ್ಬರು ನಿಮ್ಮನ್ನು ನಂಬಿರುವ ಕುಟುಂಬ ಬಗ್ಗೆ ಯೋಚಿಸಿಯಾದರೂ ಕೊರೊನಾ 2ನೇ ಅಲೆಯ ಬಗ್ಗೆ ಜಾಗೃತರಾಗಬೇಕಾದ ಅವಶ್ಯಕತೆ ಇದೆ. ಸ್ವಯಂ ನಿರ್ಭಂದ ಹೇರಿಕೊಂಡಾಗ ಮಾತ್ರ ಭೀಕರ ಗಂಡಾಂತರ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವ್ಯಾಕ್ಸಿನ್ ಗೆ ಭಯ ಪಡದೇ ಪ್ರತಿಯೊಬ್ಬರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಬೇಕು. ಮದುವೆ, ಹಾಗೂ ಶುಭ ಸಮಾರಂಭಗಳಲ್ಲಿ ಜನ ನಿಯಂತ್ರಣದ ಬಗ್ಗೆ ಕಠಿಣ ಕ್ರಮ ಜರುಗಿಸಲಾಗುವುದು. ಜಾತ್ರೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಿ, ಜನರು ಜವಾಬ್ದಾರಿಯಿಂದ ವರ್ತನೆ ಮಾಡಬೇಕು. ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದ್ದ ಕೊರೊನಾ ಕೆಲದಿನಗಳಿಂದ ನಿತ್ಯ 18 ರಿಂದ 20 ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಹೀಗೆ ಮುಂದುವರೆದರೆ ಪರೀಸ್ಥಿತಿ ಕೈಮೀರುವ ಸಾಧ್ಯತೆ ಇದೆ. ಜನರು ಇದನ್ನು ಅರಿತುಕೊಂಡು ಸುರಕ್ಷಿತವಾಗಿರಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
