ಮಹಾರಾಷ್ಟ್ರಕ್ಕೆ ಖಡಕ್ ಸಂದೇಶ ರವಾನಿಸಿದ ಲಕ್ಷ್ಮಣ್ ಸವದಿ!

ಬೆಳಗಾವಿ : ಡಿಸಿಎಂ ಲಕ್ಷ್ಮಣ ಸವದಿ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ತಿರುಗೇಟು ನೀಡಿ, ವಾಗ್ದಾಳಿ ನಡೆಸಿದ್ದಾರೆ.

ಸೂರ್ಯ, ಚಂದ್ರರು ಇರುವವರೆಗೂ ಬೆಳಗಾವಿ ಕರ್ನಾಟಕಕ್ಕೆ ಸಂಬಂಧಿಸಿದ್ದು, ಈ ವಿಷಯದ ಕುರಿತು ಯಾರೇ ಹೇಳಿದರೂ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ.

ಇಲ್ಲಿದ್ದೂ ಕನ್ನಡ ನೆಲದ ವಿರುದ್ಧ ಯಾರೇ ಮಾತನಾಡಿದರೂ ಕರ್ನಾಟಕ ಸರ್ಕಾರ ಅವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತದೆ. ಆನೆ ಹೊರಟರೆ ನಾಯಿ ಬೊಗಳುತ್ತವೆ. ಅದಕ್ಕೆ ನಾವು ಚಿಂತಿಸಬೇಕಿಲ್ಲ ಎಂದು ಮಹಾರಾಷ್ಟ್ರಕ್ಕೆ ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರ ಏನೇ ಪ್ರಯತ್ನಿಸಿದರೂ ಬೆಳಗಾವಿ ನಮ್ಮದೇ. ಆ ರಾಜ್ಯ ತನ್ನ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಈ ರೀತಿಯ ಮಾತುಗಳನ್ನು ಆಡುತ್ತದೆ. ಸಂಘಟನೆಗಾಗಿ ಮಹಾರಾಷ್ಟ್ರ ಈ ರೀತಿ ವರ್ತಿಸುತ್ತಿದೆ. ನವೆಂಬರ್ ತಿಂಗಳಲ್ಲಿ ಮಾತ್ರ ಅವರ ಹಾರಾಟ, ಚೀರಾಟ ಇರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ನಮ್ಮ ಜಾಗದಲ್ಲಿ ನಿಂತು ಹೇಳಿದರೆ, ನಾವು ಉತ್ತರ ನೀಡುತ್ತೇವೆ. ಹೇಡಿಯಂತೆ ಅವರ ನೆಲದಲ್ಲಿ ಕುಳಿತು ಮಾತನಾಡಿದರೆ, ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Exit mobile version