ಬೆಂಗಳೂರು ಗಲಭೆ ಪ್ರಕರಣ – ಮಾಜಿ ಮೇಯರ್ ಪತ್ತೆಗಾಗಿ ವಿಶೇಷ ತಂಡ ರಚನೆ!

ಬೆಂಗಳೂರು : ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆಯ ಪ್ರಮುಖ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ ಅವರ ಪತ್ತೆಗಾಗಿ ಸಿಸಿಬಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಸಂಪತ್ ರಾಜ್ ಅವರು, ಆಸ್ಪತ್ರೆಯಿಂದಲೇ ತಲೆ ತಪ್ಪಿಸಿಕೊಂಡಿದ್ದಾರೆ. ಅವರು, ಬೇರೆ ರಾಜ್ಯಕ್ಕೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಫೋನ್ ಕೂಡ ಸ್ವೀಚ್ ಆಫ್ ಆಗಿದೆ. ಇದರೊಂದಿಗೆ ಅವರ ಕುಟುಂಬಸ್ಥರನ್ನು ಪತ್ತೆ ಹಚ್ಚುವ ಕಾರ್ಯ ಕೂಡ ವಿಫಲವಾಗಿದೆ. ಸಂಪತ್ ರಾಜ್ ಇರುವಿಕೆಯ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ ಎಂದು ತಿಳಿದು ಬಂದಿದೆ. ಶೀಘ್ರದಲ್ಲಿಯೇ ಬಂಧಿಸಲಾಗುತ್ತದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. 

ಸಂಪತ್ ರಾಜ್ ಬಿಡುಗಡೆಗೂ ಮುನ್ನ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಆಸ್ಪತ್ರೆ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿತ್ತು. ಅವರು ಕೂಡ ಅದನ್ನು ಪಾಲಿಸಿಲ್ಲ. ಹೀಗಾಗಿ ಆಸ್ಪತ್ರೆಗೂ ನೊಟೀಸ್ ನೀಡಲಾಗಿದೆ. 

ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಸಂಪತ್ ರಾಜ್, ಸೋಂಕು ತಗುಲಿರುವ ನೆಪದಲ್ಲಿ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಸಿಸಿಬಿ ಅಧಿಕಾರಿಗಳು ತೆರಳುವ ಹೊತ್ತಿಗಾಗಲೇ ಡಿಸ್ಚಾರ್ಜ್ ಆಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Exit mobile version