ಸ್ಮಶಾನವಿದೆ ಆದರೆ ಶವ ಸಂಸ್ಕಾರ..?: ಪಟ್ಟಣ ಪಂಚಾಯತಿ ಮುಂದೆ ಶವ ಇಟ್ಟು ಪ್ರತಿಭಟನೆ!

naregal protest officer

ಸ್ಮಶಾನವಿದೆ ಆದರೆ ಶವ ಸಂಸ್ಕಾರ..? ಪಟ್ಟಣ ಪಂಚಾಯತಿ ಮುಂದೆ ಶವ ಇಟ್ಟು ಪ್ರತಿಭಟನೆ!

ನರೇಗಲ್ಲ: ಅಂತ್ಯಕ್ರಿಯೇಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಹಾಗೂ ಕೆಸರು ಗದ್ದೆಯಂತಾದ ರಸ್ತೆಗಳಿಂದ ಶವಸಂಸ್ಕಾರಕ್ಕೆ ಜನರು ಪರದಾಡುವಂತಾಗಿದ್ದು, ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತಿ ಗಮನ ಹರಿಸದೇ ಇರುವ ಕ್ರಮ ಖಂಡಿಸಿ ಇಂದು ನರೇಗಲ್ ಪಟ್ಟಣ ಪಂಚಾಯತಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ನರೇಗಲ್ಲನಲ್ಲಿ ನಡೆಯಿತು.

ಇಲ್ಲಿನ 14ನೇ ವಾರ್ಡಿನ ನಿವಾಸಿಗಳು ಪ್ರತಿಭಟನೆ ನಡೆಸಿ ಪಟ್ಟಣ ಪಂಚಾಯತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಈಗಾಗಲೇ ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ಸ್ಮಶಾನಕ್ಕೆ ಹೋಗುವ ದಾರಿ ಹಾಗೂ ಹೂಳುವ ಜಾಗ ಹದಿಗೆಟ್ಟಿದೆ ಅದನ್ನು ಅಭಿವೃದ್ಧಿ ಪಡಿಸಿ ಎಂದು ಐದಾರು ತಿಂಗಳಿನಿಂದ ಹೇಳಿದರೂ, ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಪಟ್ಟಣ ಪಂಚಾಯತಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ರಸ್ತೆಯಲ್ಲ ಕೆಸರು ಗದ್ದೆಯಾಗಿದೆ ಹಾಗೂ ಸ್ಮಶಾನದ ತುಂಬೆಲ್ಲ ನೀರು ನಿಂತಿದೆ. ಗಿಡ ಕಂಟಿ ಬೆಳೆದು ಸ್ಮಶಾನ ಹುಡುಕುವ ಸ್ಥಿತಿ ಬಂದಿದೆ. ಒಬ್ಬರ ಶವವನ್ನು ಪಟ್ಟಣ ಪಂಚಾಯ್ತಿ ಎದುರು ಇಟ್ಟು ಪ್ರತಿಭಟಿಸಿದರು.

ಸ್ಥಳೀಯರು ಈ ಹಿಂದೆ ರಸ್ತೆ, ಸ್ಮಶಾನ ಅಭಿವೃದ್ಧಿ ಮಾಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ನೆಪ ಹೇಳುತ್ತಾ ದಿನಗಳನ್ನು ಮುಂದೆ ಹಾಕಿದ್ದಾರೆ. ಸ್ಮಶಾನಕ್ಕೆ ಹೋಗುವ ರಸ್ತೆ ಒತ್ತುವರಿಯಾಗಿದೆ ತೆರವು ಮಾಡಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ನರೇಗಲ್ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ ಬಿ. ಕೊಳ್ಳಿ, ಮುಖ್ಯಾಧಿಕಾರಿ ಮಹೇಶ ಬಿ. ನಿಡಶೇಸಿ, ಪಟ್ಟಣ ಪಂಚಾಯ್ತಿ ಆರೋಗ್ಯ ನಿರೀಕ್ಷಕು ರಾಮಚಂದ್ರ ಕಜ್ಜಿಯವರು ಸ್ಥಳೀಯರನ್ನು ಮನವೊಲಿಸಿದರು.

ಈ ವೇಳೆ ಮುಖ್ಯಾಧಿಕಾರಿ ಕೆಲವೇ ದಿನಗಳಲ್ಲಿ ಅಭಿವೃದ್ದಿ ಪಡಿಸುವ ಭರವಸೆಯನ್ನು ನೀಡಿದರು. ಸ್ಥಳದಲ್ಲಿ ಶೇಖಪ್ಪ ಲಕ್ಕನಗೌಡ್ರ, ಆನಂದ ಕಳಕೊಣ್ಣವರ, ಮಲ್ಲಪ್ಪ ಗಂಗರಗೊಂಡ. ಶಶಿ ಹಕ್ಕಿ, ಸತೀಶ್ ಮಾಳವಾಡ, ಚಂದ್ರು ಲಕ್ಕನಗೌಡ್ರ, ವೀರುಪಾಕ್ಷಿ ಸೋಮಗೊಂಡ ಇದ್ದರು.

Exit mobile version