ಫಿರೋಜ್ ಎಂ
ಗಜೇಂದ್ರಗಡ: ಕೋಟೆ ಕೊತ್ತಲುಗಳ ನಾಡೆಂದೆ ಕರೆಯುವ ಗಜೇಂದ್ರಗಡ ಬೆಟ್ಟಗಳ ಸಾಲಿನಲ್ಲಿ ಗುರುವಾರ ದಟ್ಟನೆಯ ಮಂಜು ಆವರಿಸಿತ್ತು. ನೋಡುಗರನ್ನು ತನ್ನತ್ತ ಆಕರ್ಷಿಸುವಂತಿತ್ತು.
ಐತಿಹಾಸಿಕ ನಗರಿ ಎಂದೇ ಖ್ಯಾತಿ ಪಡೆದ ಗಜೇಂದ್ರಗಡ ಸೇರಿ ಸುತ್ತಲಿನ ಬೆಟ್ಟ ಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಹಸಿರಿನ ನಡುವೆ ಮೈ ಮರೆತಷ್ಟು ಹೊಸದಾಗಿ ತೆರೆದುಕೊಳ್ಳುವ ಮಂಜು ಕಂಡು ಭೂ ಲೋಕದ ಸ್ವರ್ಗ ಎಂಬಂತೆ ಭಾಸವಾಗುತ್ತಿತ್ತು. ಇನ್ನು ಬೆಳಗಿನ ವೈಭವ ಮಲೆನಾಡಿನ ಬೆಟ್ಟ ಗುಡ್ಡಗಳಿಗೆ ಕಮ್ಮಿಯಿಲ್ಲ ಎನ್ನುವಷ್ಟು ಮಂಜು ಕವಿದಿತ್ತು.
ಇತ್ತೀಚಿಗೆ ನಿರಂತರವಾಗಿ ಸುರಿದ ಪರಿಣಾಮವಾಗಿ ಗಜೇಂದ್ರಗಡ ಬೆಟ್ಟಗಳಲ್ಲದೇ ಊರೊಳಗೂ ಸಹ ದಟ್ಟ ಮಂಜು ಆವರಿಸುವ ಮೂಲಕ ರಮಣೀಯವಾಗಿಸಿದೆ. ಬೆಳಿಗ್ಗೆ 8:30ರ ವರೆಗೂ ಸೂರ್ಯನ ದರ್ಶನವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ದಟ್ಟವಾದ ಮಂಜು ಆವರಿಸಿತ್ತು. ಬಿಸಿಲಿನ ಹೊಡೆತಕ್ಕೆ ಕಾದು ಕೆಂಡದಂತಾಗುವ ಬಂಡೆಗಳು ಬೆಳಗಾಗುವಷ್ಟರಲ್ಲಿ ಮಂಜು ಆವರಿಸುವ ಮೂಲಕ ಪ್ರಕೃತಿ ಪ್ರೀಯರನ್ನು ತನ್ನತ್ತ ಸೆಳೆಯುತ್ತಿದೆ.
ವಾತಾವರಣದಲ್ಲಿ ಮಂಜು ಮುಸುಕಿರುವುದರ ಆಹ್ಲಾದ, ತಣ್ಣನೆಯ ಅನುಭವವನ್ನು ಪಡೆದ ಜನರು, ಕೆಲ ಹೊತ್ತು ಖುಷಿಯಿಂದ ಕಾಲ ಕಳೆದರು. ಜಾಗಿಂಗ್ ಹೋಗಿದ್ದೋರು ಚುಮುಚುಮು ಚಳಿ, ಮಂಜಿನ ಮಬ್ಬಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಬೆಟ್ಟ-ಗುಡ್ಡಗಳು ಶುಭ್ರವಾದ ಶ್ವೇತವರ್ಣದ ಚಾದರ ಹೊದ್ದಂತೆ ಕಂಗೊಳಿಸುತ್ತಿತ್ತು. ಬೆಳ್ಳಂ ಬೆಳಗ್ಗೆ ಚಿಲಿಪಿಲಿಯಾಡಬೇಕಿದ್ದ ಪಕ್ಷಿಗಳು ಶೀತದ ಪರಿಣಾಮ ಕೊಂಚ ತಡವಾಗಿ ಸದ್ದು ಮಾಡಿದವು.
ಸೂರ್ಯೋದಯವಾಗುತ್ತಿದ್ದಂತೆ ಎಲ್ಲೆಡೆ ಬೆಳಕು ಹರಿಯುವ ಬದಲಿಗೆ ದಾರಿ ಕಾಣದಂತೆ ದಟ್ಟ ಮಂಜು ಆವರಿಸುತ್ತಿದೆ. ಸಿನಿಮಾಗಳಲ್ಲಿ ಕಾಣುವ ಪ್ರಕೃತಿ ವೈಭವ ಕಣ್ಣೆದುರೇ ಕಾಣತೊಡಗಿದ್ದು, ಜನರು ಮಂಜು ಮತ್ತು ಮೈಕೊರೆವ ಚಳಿಯ ಪ್ರಕೃತಿ ಬದಲಾವಣೆಗೆ ಫಿದಾ ಆಗಿದ್ದಾರೆ. ಆದರೆ ಗಜೇಂದ್ರಗಡದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಬೆಳಗ್ಗೆ ಆವರಿಸುತ್ತಿರುವ ದಟ್ಟ ಮಂಜು ಹಾಗೂ ಮೈ ಕೊರೆಯುವ ಚಳಿ ವಾಹನ ಸಂಚಾರ ಸೇರಿದಂತೆ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರತೊಡಗಿದ್ದು, ಅನೇಕರು ಅಡಚಣೆ ಅನುಭವಿಸಿ ಪರದಾಡುವಂತಾಗಿದೆ.
ವೈಭವ ನೋಡುವುದೇ ಒಂದು ಭಾಗ್ಯ ಮನಸ್ಸು ನಿರ್ಮಲವಾಗಿಸಿ, ನೆಮ್ಮದಿ ಕರುಣಿಸುವ ಏಕೈಕ ಮಾರ್ಗವೇ ಸಂಚಾರ. ಆದರೆ ಅಲ್ಲಿ, ಇಲ್ಲಿ ಹೋಗುವ ಬದಲು ಗಜೇಂದ್ರಗಡದ ಬೆಟ್ಟದಲ್ಲಿ ಬೆಳಿಗ್ಗೆ ತೆರೆದುಕೊಳ್ಳುವ ಭೂ ಲೋಕದ ಸ್ವರ್ಗದ ವೈಭವ ನೋಡುವುದೇ ಒಂದು ಭಾಗ್ಯ. ಅಷ್ಟರ ಮಟ್ಟಿಗೆ ಪ್ರಕೃತಿ ಎಲ್ಲರನ್ನು ಸೇಳೆಯುತ್ತಿದ್ದಾಳೆ. – ರಾಜು ಸಾಂಗ್ಲಿಕಾರ, ಸ್ಥಳೀಯರು
ಮಂಜಿನ ನಗರಿಯಾದ ಕೋಟೆ ನಾಡು
ಐತಿಹಾಸಿಕ ಹಿನ್ನಲೆ ಹೊಂದಿರುವ ಕೋಟೆ ಕೊತ್ತಲುಗಳ ನಾಡು ಗಜೇಂದ್ರಗಡದಲ್ಲಿ ಯಾವ ಸಂದರ್ಭದಲ್ಲಾದರೂ ಬಿಸಿಲಿನದ್ದೆ ಮೇಲುಗೈಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಬೆಟ್ಟ, ಗುಡ್ಡಗಳೆ ಕಾಣದಷ್ಟು ಮಂಜಿನ ನಲಿವು ಕಣ್ಮನ ತಣಿಸುವಂತಾಗಿ, ಕೋಟೆ ನಾಡು ಮಂಜಿನ ನಗರಿಯಂತಾಗಿದೆ.
ಪ್ರವಾಸಿ ತಾಣಮಾಡಲು ಆಗ್ರಹ
ವಿವಿಧತೆಯಲ್ಲಿ ಏಕತೆಯನ್ನು ಸಾರುವ ಐತಿಹಾಸಿಕ ಗಜೇಂದ್ರಗಡದಲ್ಲಿನ ಪ್ರೇಕ್ಷಣೀಯ ತಾಣಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಸಂಸದರು ಇಚ್ಚಾಶಕ್ತಿ ಪ್ರದರ್ಶಿಸಿ ಗಜೇಂದ್ರಗಡವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲು ಮುಂದಾಗಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.
