ಬೆಂಗಳೂರು: ಕೋವಿಡ್ ಸಂಬಂಧಿ ಪಿಪಿಇ ಕಿಟ್ ಮತ್ತು ಇತರ ಸಲಕರಣೆ ಕೊಳ್ಳುವಾಗ ಸರ್ಕಾರ ಭಾರಿ ದುಡ್ಡು ಹೊಡೆದಿದೆ ಎಂಬ ತಮ್ಮ ಆರೋಪವನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರವೂ ಪುನರುಚ್ಛರಿಸಿದ್ದಾರೆ.
ತಮ್ಮ ಟ್ವೀಟರ್ ಖಾತೆಯಲ್ಲಿ ‘#100PercentCorruptSarkar’ ಹ್ಯಾಷ್ ಟ್ಯಾಗ್ ಮುಂದುವರೆಸಿರುವ ಅವರು, ತಪ್ಪು ತಿದ್ದಿಕೊಳ್ಳದೇ ಇದ್ದಾಗ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯ’ ಎಂದು ಟ್ವೀಟ್ ಮಾಡಿ, ಯಡಿಯೂರಪ್ಪ, ಶ್ರೀರಾಮುಲು, ಸುಧಾಕರ್ ಮತ್ತು ಗೋವಿಂದ ಕಾರಜೋಳರನ್ನು ಟ್ಯಾಗ್ ಮಾಡಿದ್ದಾರೆ.
‘ಈ ಸಂಕಷ್ಟ ಸಮಯದಲ್ಲಿ ಅಗತ್ಯ ಬಿದ್ದಾಗ ಸಹಕಾರ ಕೊಟ್ಟೆವು. ಸರ್ಕಾರದ ಅಕ್ರಮ-ವೈಫಲ್ಯಗಳನ್ನು 3 ತಿಂಗಳ ಕಾಲ ಪತ್ರಗಳ ಮೂಲಕವೇ ಟೀಕಿಸಿದ್ದೆ. ಆದರೆ ಬಿಎಸ್ವೈ ತಿದ್ದಿಕೊಳ್ಳದ ಕಾರಣ ಈಗ ಬಹಿರಂಗವಾಗಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದೇನೆ ಎಂದಿದ್ದಾರೆ.
ಭ್ರಷ್ಟ ಪ್ರಭುತ್ವದ ಪರ ನಿಲ್ಲಲೂ ಆಗುವುದಿಲ್ಲ. ವಿರೋಧ ಪಕ್ಷವಾಗಿ ನಾವು ಜನರ ಪರ, ಭ್ರಷ್ಟ ಸರ್ಕಾರದ ಪರ ಅಲ್ಲ ಎಂದೂ ಅವರು ಟೀಕಿಸಿದ್ದಾರೆ.
ಬುಧವಾರದ ಟ್ವೀಟ್ ನಲ್ಲಿ ಅವರು, ‘ಮುರುಗೇಶ್ ನಿರಾಣಿ ಬಳಿಯಿರುವ ಪೆನ್ ಡ್ರೈವ್ ನಲ್ಲಿ ಅಕ್ರಮ ಖರೀದಿಯ ವಿವರ ಇವೆಯಂತೆ. ಬಿಎಸ್ವೈ ಅದನ್ನು ಪಡೆದು ಬಹಿರಂಗ ಮಾಡಲಿ’ ಎಂದು ಹೇಳಿ, ಸದನ ಸಮಿತಿಯ ವರದಿಯ ಪುಟವೊಂದನ್ನು ಸಾಕ್ಷಿಯಾಗಿ ಅಟ್ಯಾಚ್ ಮಾಡಿದ್ದರು.