ಶಿರಹಟ್ಟಿ ಕಟ್ಟಿಗೆ ಅಡ್ಡೆ ಪ್ರಕರಣ: ಅರಣ್ಯ ಇಲಾಖೆ ಕಣ್ಣಿದ್ದು ಕುರುಡಾಯಿತೆ?

ಗದಗ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ನಡೆಯುತ್ತಿರುವ ಸಾ-ಮಿಲ್ಗಳಿಗೆ ಯಾವುದೇ ಪರವಾನಿಗೆ ಇಲ್ಲದೆ ರಾಜಾರೋಷವಾಗಿ ಕಟ್ಟಿಗೆ ವ್ಯಾಪಾರ ಮಾಡುತ್ತಿರುವುದು ಸರಕಾರದ ಕಣ್ಣಿಗೆ ಮಣ್ಣೆರೆಚಿದಂತಾಗಿದೆ.
ಸರಕಾರ ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಹತ್ತಾರು ಸಂದೇಶವನ್ನು ಸಾರುವ ಜಾಹೀರಾತುಗಳನ್ನು ಹೊರಹಾಕಿ ಮರಗಳನ್ನು ಬೆಳೆಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅರಣ್ಯದ ಉಳಿವಿಗಾಗಿ ಪ್ರತ್ಯೇಕ ಇಲಾಖೆಯನ್ನೆ ಮಾಡಿದೆ. ಇಲಾಖೆಯ ವತಿಯಿಂದ ವರ್ಷದಿಂದ ವರ್ಷಕ್ಕೆ ಹಲವು ವಿಭಿನ್ನ ಯೋಜನೆಗಳು ಬಂದು ಸಸಿ ನೆಡಲು ಮತ್ತು ಅವುಗಳನ್ನು ಪೋಷಿಸಲು ಸರಕಾರ ಇಂದು ಸಾಕಷ್ಟು ಅನುದಾನವನ್ನೂ ಬಿಡುಗಡೆ ಮಾಡುತ್ತಿದೆ. ಆದರೆ ಶಿರಹಟ್ಟಿ ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯವರು ಸಸಿಗಳ ಪೋಷಣೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ನಿಜ. ಆದರೆ ಪಟ್ಟಣದಲ್ಲಿರುವ ಸಾ-ಮಿಲ್ ಗಳಿಗೆ ಲೋಡ್ ಗಟ್ಟಲೇ ಹಗಲು, ರಾತ್ರಿ ಕಟ್ಟಿಗೆ ಬಂದು ಬೀಳುತ್ತಿವೆ. ಇದುವರೆಗೂ ಸಂಬಂಧಪಟ್ಟ ಯಾವ ಅಧಿಕಾರಿಯೂ ಅಂತಹ ವಾಹನಗಳನ್ನು ಜಪ್ತಿ ಮಾಡಿ ದಂಡ ವಿಧಿಸಿದ ಉದಾಹರಣೆಗಳಿಲ್ಲ.
ಸಾ-ಮಿಲ್ ಮಾಲಿಕರು ರೈತರಿಗೆ ಹಣದ ಆಮಿಷ ತೋರಿ ಹೊಲಗಳಲ್ಲಿನ ದೊಡ್ಡ ದೊಡ್ಡ ಮರಗಳನ್ನು ಕಡಿಯುತ್ತಿದ್ದಾರೆ. ಪಾಪ ಬರಗಾಲದ ಬವಣೆಯಲ್ಲಿ ಬೆಂದ ರೈತರು ಬಿತ್ತುವ ಬೀಜಗಳನ್ನು ಖರೀದಿಸಲು ಹೊಲಗಳಲ್ಲಿನ ಮರಗಳನ್ನು ಮಾರುತ್ತಿದ್ದಾರೆ ಎಂಬ ವದಂತಿ ಇದೆ. ಅದೇ ಮರಗಳ ತುಂಡುಗನ್ನು ತಂದು ಸಾ-ಮಿಲ್ ಗಳಲ್ಲಿ ಕೊರದು ತಯಾರಿಸಿ ಅದೇ ರೈತರಿಗೆ ಬೇಕಾದ ಕುಂಟೆ, ರಂಟೆ, ಚಕ್ಕಡಿಗಳ ಸಾಮಾನುಗಳಿಗೆ ಅದರ ಎರಡುಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಲೈಸನ್ಸ ರಹಿತವಾದ ಈ ಸಾ-ಮಿಲ್ಗಳ ವ್ಯಾಪಾರ ವಹಿವಾಟಿಗೆ ಯಾವುದೇ ಅಡೆತಡೆ ಇಲ್ಲದೆ ಇದ್ದುದರಿಂದ ಇಂತಹ ಮಿಲ್ ಗಳು ನಾಯಿಕೊಡೆಯಂತೆ ವರ್ಷಕ್ಕೊಂದರಂತೆ ನಿರ್ಮಾಣವಾಗುತ್ತಲಿವೆ. ಮೊದಲೇ ಹಿಂದುಳಿದ ತಾಲೂಕು ಎಂಬ ಹಣೆಪಟ್ಟೆ ಹೊಂದಿರುವ ಶಿರಹಟ್ಟಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನಷ್ಟೂ ಹಿಂದೆ ಉಳಿಯುವಂತಾಗಿದೆ. ಹೀಗೆ ಅರಣ್ಯ ಇಲಾಖೆಯಾಗಲಿ ಹಾಗೂ ಸ್ಥಳೀಯ ಪಟ್ಟಣ ಪಂಚಾಯ್ತಿಯಾಗಲಿ ಈ ಸಾ-ಮಿಲ್ ಗಳ ಬಗ್ಗೆ ಕಂಡರೂ ಕಾಣದೆ ತಟಸ್ಥ ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ಕಾನೂನು ಬಾಹಿರವಾದ ಸಾ-ಮಿಲ್ ಗಳ ವ್ಯಾಪಾರ ವಹಿವಾಟಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರ್.ಎಫ್.ಓ ಸತೀಶ್, ಇಂಥ ಪ್ರಕರಣಗಳು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳುವುದಾಗಿ ಉತ್ತರಪ್ರಭಕ್ಕೆ ತಿಳಿಸಿದರು.

Exit mobile version