ಕಟ್ಟಿಗೆ ಅಡ್ಡೆಗಳಿಂದ ಶಿರಹಟ್ಟಿ ಜನರಿಗೆ ಕೊರೊನಾ ಭಯ..!

ಗದಗ: ಇಡೀ ಜಗತ್ತು ಕೊರೊನಾ ಭಯದಲ್ಲಿ ದಿನ ಕಳೆಯುತ್ತಿದೆ. ದಿನದಿಂದ ದಿನಕ್ಕೆ ನಿರೀಕ್ಷೆಗೂ ಮೀರಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಾತ್ರ ಕಟ್ಟಿಗೆ ಅಡ್ಡೆಗಳು ಯಾವುದೇ ಅಡ್ಡಿ, ಆತಂಕಗಳಿಲ್ಲದೆ ನಡೆಯುತ್ತಿವೆ.

ಇದೇನಿದು ಕೊರೊನಾಕ್ಕೂ, ಕಟ್ಟಿಗೆ ಅಡ್ಡೆಗಳಿಗೂ ಏನು ಸಂಬಂಧ ಅನ್ಕೊಂಡ್ರಾ..? ಹೌದು ಕಟ್ಟಿಗೆ ಅಡ್ಡೆಗಳ ಹುಡಿಗೂ, ಕೊರೊನಾಕ್ಕೂ ಸಂಬಂಧವಿದೆ. ಆದರೆ ಕಟ್ಟಿಗೆ ಅಡ್ಡೆಗಳ ಮಾಲಿಕರು ಮಾತ್ರ ಯಾರೇ ಕೂಗಾಡಲೇ, ಕೊರೊನಾ ವಾರಿಯರ್ಸ್ ಹೋರಾಡಲಿ ನಮ್ಮ ನೆಮ್ಮದಿಗೆ ಭಂಗವಿಲ್ಲ ಎನ್ನುವ ಮೊಂಡುವಾದದಲ್ಲಿದ್ದಾರೆ.

ಶಿರಹಟ್ಟಿ ಪಟ್ಟಣದಲ್ಲಿ ಪಟ್ಟಣಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 18 ವಾರ್ಡಗಳಿವೆ. ಇವುಗಳಲ್ಲಿ ಒಟ್ಟು 7 ಕಟ್ಟಿಗೆ ಅಡ್ಡೆಗಳು ಜನವಸತಿ ಪ್ರದೇಶಗಳಲ್ಲಿವೆ. ಪಟ್ಟಣದ ಹೃದಯ ಭಾಗಗಳಲ್ಲಿ ಕಟ್ಟಿಗೆ ಅಡ್ಡಗಳ ಸದ್ದು ಆರಂಭವಾಗಿ ಮೂರು ದಶಕಗಳ ಕಾಲ ಸಮೀಪಿಸುತ್ತಿದೆ. ಅನಧಿಕೃತವಾಗಿ ಕಟ್ಟಿಗೆ ಅಡ್ಡಗಳನ್ನು ನಡೆಸುತ್ತಿದ್ದರೂ ಮಾಲಿಕರ ಮನಸ್ಥಿತಿ ಮಾತ್ರ ಆಡಳಿತ ವ್ಯವಸ್ಥೆಗೆ ಸೆಡ್ಡು ಹೊಡೆದಂತಿದೆ. ಇಷ್ಟು ವರ್ಷಗಳ ಕಾಲ ರಾಜಾರೋಷವಾಗಿ ಅಡ್ಡೆಗಳು ಕೆಲಸ ಆರಂಭಿಸಿದರೂ ಇದು ಆಡಳಿತ ವ್ಯವಸ್ಥೆಗೆ ಕಾಣುತ್ತಿಲ್ಲವೇ? ಅಥವಾ ಮಾಲಿಕರ ಪ್ರಭಾವ ಅಧಿಕಾರಿಗಳನ್ನು ಕಣ್ಣಿದ್ದು ಕುರುಡರನ್ನಾಗಿಸಿದೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬ ಉತ್ತರಪ್ರಭದೊಂದಿಗೆ ಮಾತನಾಡಿ ಏನ್ ಮಾಡಬೇಕ್ರಿ ಸಾಹೇಬ್ರ ಇಪ್ಪತ್-ಇಪ್ಪತ್ತೈದ್ ವರ್ಷದ ಹೊತ್ತಾತು. ನಾವು ಬಡುವ್ರು. ನಮ್ಮ ಧ್ವನಿ ಯಾರಿಗ್ ಕೇಳ್ತೈತ್ರಿ. ಈಗೇನಿದ್ರು ರೊಕ್ಕ್, ಅಧಿಕಾರ ಇದ್ದಾರ್ ಕಾಲ. ಕಟ್ಟಿಗಿ ಹುಡಿ ಕುಡಿದು ಜೀವನ ಸಾಕಾಗೈತಿ ನೀವರ ನಮಗ ನ್ಯಾಯ ಕೊಡಿಸಿ ಪುಣ್ಯಾ ಕಟ್ ಕೊಳ್ರಿ ಅಂದು ಕೇಳಿಕೊಂಡರು.

ಅಡ್ಡೆಗಳ ಹುಡಿ ಕೊರೊನಾ ಸೊಂಕಿಗೆ ಕಿಡಿ..!

ಇಲ್ಲಿನ ಕಟ್ಟಿಗೆ ಅಡ್ಡೆಗಳಿಂದ ಹೊರಹೊಮ್ಮುವ ಹುಡಿ ಕೊರೊನಾ ಸೋಂಕು ಹರಡಲು ಸಣ್ಣ ಮಾರ್ಗವಾಗಬಹುದಾ? ಎಂದು ಜನ ಚಿಂತಿಸುವಂತೆ ಮಾಡಿದೆ. ಇದಕ್ಕೆ ಕಾರಣ ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಕಟ್ಟಿಗೆ ಹುಡಿಯಿಂದ ಅಕುಪೇಶನ್ ಲಂಗ್ ಡಿಸೀಜ್ ಬರುತ್ತದೆಯಂತೆ. ಅದರೆ ಇದರ ಧೂಳು ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆಯಾಗಿದೆ. ಕೊರೊನಾ ಕೂಡ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ. ಈಗಾಗಲೇ ಬಹಳಷ್ಟು ವರ್ಷಗಳಿಂದ ಈ ಅಡ್ಡೆಗಳ ಸುತ್ತಮುತ್ತಲಿನ ಜನ ಕಟ್ಟಿಗೆ ಹುಡಿಯ ಜೊತೆಗೆ ಜೀವನ ಸಾಗಿಸುತ್ತಿದ್ದಾರೆ.

ಶಿರಹಟ್ಟಿ ಪಟ್ಟಣದಲ್ಲಿ ಕಟ್ಟಿಗೆ ಅಡ್ಡಗಳ ಕುರಿತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಿ.ಮಲ್ಲೇಶ್ ಪ್ರತಿಕ್ರಿಯಿಸಿ ಈಗಾಗಲೇ ಪಟ್ಟಣದಲ್ಲಿರುವ 7 ಕಟ್ಟಿಗೆ ಅಡ್ಡಗಳ ಸ್ಥಳಾಂತರಕ್ಕೆ ವಾರದ ಹಿಂದೆಯೇ ಆದೇಶ ಮಾಡಲಾಗಿದೆ. ಆದರೆ ಈವರೆಗೆ ಸ್ಥಳಾಂತರ ಮಾಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ನಿತ್ಯ ಕಟ್ಟಿಗೆ ಅಡ್ಡೆಗಳಿಂದ ಜನ ನರಕಯಾತನೆಯನ್ನು ಅನುಭವಿಸುತ್ತಿದ್ದರೂ ಕೂಡ ಯಾರೊಬ್ಬರೂ ಬಹಿರಂಗವಾಗಿ ವಿರೋಧಿಸಲು ಮುಂದಾಗುತ್ತಿಲ್ಲ. ಅಂದರೆ ಅಡ್ಡೆಗಳ ಮಾಲಿಕರ ಪ್ರಭಾವ ಎಷ್ಟರ ಮಟ್ಟಿಗೆ ಇರಬಹುದು? ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಹೀಗಿದ್ದಾಗ ಈಗಿನ ಇಂಥ ಗಂಭೀರ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಇದು ಪರಿಣಾಮ ಬೀರಿ ಜನ ಆರೋಗ್ಯ ತಪ್ಪುವ ಮೊದಲು ಇನ್ನಾದರೂ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕಿದೆ.

Exit mobile version