ನವದೆಹಲಿ : ಕೇಂದ್ರ ಸರ್ಕಾರ ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲ ಕೆಲಸಗಾರರು ಆರೋಗ್ಯಸೇತು ಆಪ್ ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸಿಬ್ಬಂದಿ ಸಚಿವಾಲಯ ಹೊರಡಿಸಿರುವ ಜ್ಞಾಪನ ಪತ್ರದಲ್ಲಿ ಯಾವುದೇ ಸಿಬ್ಬಂದಿ ಕಚೇರಿಗೆ ತೆರಳುವ ಮೊದಲು, ಅಪ್ಲಿಕೇಶನ್ನಲ್ಲಿ ತಮ್ಮ ಸ್ಥಿತಿ ಪರೀಕ್ಷಿಸಿಕೊಳ್ಳಬೇಕು. ಅದು ಸುರಕ್ಷಿತ ಎಂದು ತೋರಿಸಿದಾಗ ಮಾತ್ರ ಕಚೇರಿಗೆ ಆಗಮಿಸಬೇಕು ಎಂದು ಸರ್ಕಾರ ಹೇಳಿದೆ.
ಕೊರೊನಾ ಸೋಂಕಿತ ವ್ಯಕ್ತಿಗೆ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ಇತ್ತೀಚಿನ ಸಂಪರ್ಕಕ್ಕೆ ಬಳಕೆದಾರ ಅಥವಾ ಉದ್ಯೋಗಿ ಬಂದರೆ, ಅವನ ಅಥವಾ ಸ್ಥಳದ ಆಧಾರದ ಮೇಲೆ ಅಪಾಯದ ಕುರಿತು ಅಪ್ಲಿಕೇಶನ್, ಸಂದೇಶ ನೀಡಿದರೆ, ಅಂತಹ ಸಿಬ್ಬಂದಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು.
ಆರೋಗ್ಯ ಸೇತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್. ಇದರ ಬಳಕೆಯಿಂದ ಕೊರೊನಾ ಸೋಂಕಿನ ಅಪಾಯ ಗುರುತಿಸಬಹುದು. 10 ಭಾರತೀಯ ಭಾಷೆಗಳು ಹಾಗೂ ಇಂಗ್ಲಿಷ್ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.