ಉತ್ತರಪ್ರಭ ಸುದ್ದಿ
ನರಗುಂದ: ತಾಲೂಕಿನ ಕಲ್ಲಾಪೂರ ಗ್ರಾಮದ ಪವಾಡ ಪುರುಷ ಬಸವಣ್ಣ ಜಾತ್ರೆಯ ನಿಮಿತ್ಯ ಪಾದಯಾತ್ರೆ ಮೂಲಕ ಜಾತ್ರೆಗೆ ತೆರಳುವ ಭಕ್ತರಿಗೆ ಶಿರೋಳ ಗ್ರಾಮದ cವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು. ಶ್ರಾವಣ ಮಾಸದ ಪ್ರಥಮ ಸೋಮವಾರದಿಂದ ಪ್ರತಿ ಸೋಮವಾರವೂ ಸುತ್ತ ಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯಲ್ಲಿ ಪಾದಯಾತ್ರೆ, ಎತ್ತು ಚಕ್ಕಡಿ ಮೂಲಕ ಭಕ್ತರು ಬಸವಣ್ಣನ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ಸಕಲ ವಾದ್ಯ ಮೇಳದ ಜೊತೆಗೆ ನೂರಾರು ಹಳ್ಳಿಗಳಿಂದ ಆಗಮಿಸುವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜಾತ್ರೆಯು ನಡೆಯುತ್ತದೆ. ಬೇಡಿದವರ ವರ ಪ್ರದಾಯಕ ಕಲ್ಲಾಪುರ ಬಸವಣ್ಣ. ಸರ್ಪ ಕಚ್ಚಿದಾಗ ಇಲ್ಲಿಯ ದರ್ಶನ ಪಡೆದು ತೀರ್ಥ ಸೇವಿಸಿದರೆ ಸರ್ಪದ ವಿಷ ದೇಹವನ್ನು ಆವರಿಸುವುದಿಲ್ಲ ಎನ್ನುವ ನಂಬಿಕೆ ಇದೆ, ಹಾಗೂ ಎತ್ತುಗಳನ್ನು ದೇಗುಲಕ್ಕೆ ಪ್ರದಕ್ಷಣೆ ಹಾಕಿಸಿ ಅಂಗಾರವನ್ನು ಎತ್ತುಗಳಿಗೆ ಹಚ್ಚಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಪ್ರತೀತಿ ಇದೆ.