ಮೀಟರ್ ಬಡ್ಡಿಗೆ ಬ್ರೆಕ್ ಹಾಕಲು ಮುಂದಾದ ಸರ್ಕಾರ

ಬೆಂಗಳೂರು : ಈ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಹೊರಟಿರುವಂತ ರಾಜ್ಯ ಸರ್ಕಾರ, ಕಾಯ್ದೆಯ ತಿದ್ದುಪಡಿಗೂ ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ. ಒಂದು ವೇಳ ತಿದ್ದುಪಡಿಯಾಗಿ, ಜಾರಿಗೆ ಬಂದ್ರೆ, ಬಲವಂತವಾಗಿ ಸಾಲ ವಸೂಲಾತಿಗೆ ಬ್ರೇಕ್ ಬೀಳಲಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಬಲವಂತದಿಂದ ಸಾಲ ವಸೂಲಿ ಮಾಡುವ ಲೇವಾದೇವಿದಾರರಿಗೆ ಬಿಸಿ ಮುಟ್ಟಿಸಲು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ.

ರಾಜ್ಯದಲ್ಲಿ ಬಲವಂತದ ಸಾಲ ವಸೂಲಾತಿಯಿಂದಾಗಿ ಮಾನಸಿಕವಾಗಿ ನೊಂದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಸಾಲ ಕೊಟ್ಟು ಹೆಚ್ಚಿನ ಬಡ್ಡಿಗಾಗಿ ಕಿರುಕುಳ ನೀಡಿ, ಬಲವಂತವಾಗಿ ಸಾಲ ವಸೂಲಿ ಮಾಡುವುದನ್ನು ನಿಯಂತ್ರಿಸುವ ಸಂಬಂಧ ಕರ್ನಾಟಕ ಲೇವಾದೇವಿದಾರರ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಈ ಕುರಿತು ಮಾಹಿತಿ ನೀಡಿದ್ದು, ಕರ್ನಾಟಕ ಮನಿ ಲಾಂಡರಿಂಗ್ ಕಾಯ್ದೆ ಕಲಂ 38 ಮತ್ತು 39ಗಳಿಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಕಾಯ್ದೆ ತಿದ್ದುಪಡಿಯಾದರೆ, ಒತ್ತಾಯಪೂರ್ವಕವಾಗಿ ಸಾಲ ಮತ್ತು ಬಡ್ಡಿ ವಸೂಲಿಗೆ 6 ತಿಂಗಳು ಶಿಕ್ಷೆ ವಿಧಿಸಲಾಗುತ್ತಿತ್ತು. ಅದನ್ನು 1 ವರ್ಷಕ್ಕೆ ಹೆಚ್ಚಿಸಲಾಗುತ್ತಿದೆ. 2ನೇ ಅಪರಾಧಕ್ಕೆ 2 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. 5 ಸಾವಿರ ದಂಡವನ್ನು 50 ಸಾವಿರ ರೂಗಳಿಗೂ ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.

Exit mobile version