ನಟಿ ರಾಧಿಕಾ ಕುಮಾರಸ್ವಾಮಿ ಎಲ್ಲೂ ಓಡಿ ಹೋಗಿಲ್ವಂತೆ!

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿ ನಡೆಸಿದ ರಾಧಿಕಾ, ಯುವರಾಜ್ ಕಡೆಯಿಂದ ನಮಗೆ ಯಾವುದೇ ಹಣ ಬಂದಿಲ್ಲ, ತಮ್ಮ ಮೇಲಿನ ಆರೋಪ ಶುದ್ಧ ಸುಳ್ಳು ಎಂದು ಪ್ರತಿಕ್ರಿಯಿಸಿದರು.

ಯುವರಾಜ್ ಹಾಗೂ ತಮಗೂ ಬಹಳ ವರ್ಷದಿಂದ ಪರಿಚಯವಿದೆ. ಐತಿಹಾಸಿಕ ಸಿನಿಮಾ ನಿರ್ಮಾಣ ಮಾಡುವುದಕ್ಕೆ ನಾನು ಅವರು ಮಾತನಾಡಿದ್ದೇವು. ಆದರೆ, ಅವರು ಎರಡು ಬ್ಯಾನರ್‌ನಲ್ಲಿ ಸಿನಿಮಾ ಮಾಡುವುದಾಗಿ ಹೇಳಿದ ಕಾರಣ ನಾನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಸಿನಿಮಾ ನಿಂತುಹೋಯಿತು. ಇನ್ನೂ ದೊಡ್ಡ ದೊಡ್ಡವರಿಗೇ ಯುವರಾಜ್ ಅವರು ಯಾಮಾರಿಸಿದ್ದಾರೆ. ಇನ್ನೂ ನನಗೆ ಯಾಮಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ನಾನು ಯಾರಿಗೂ ಮೋಸ ಮಾಡಿಲ್ಲ. ಬದಲಿಗೆ ನನಗೆ ಮೋಸ ಮಾಡಿರುವವರು ಬಹಳಷ್ಟು ಜನರಿದ್ದಾರೆ ಎಂದರು.

ಯುವರಾಜ್ ಕಷ್ಟದ ಸಮಯದಲ್ಲಿ ನಮ್ಮ ತಂದೆಯವರು, ಅವರಿಗೆ ಸಹಾಯ ಮಾಡಿದ್ದರು. ಹಲವು ದಿನಗಳ ಬಳಿಕ ನಮ್ಮನ್ನು ಭೇಟಿಯಾಗಿ ಯುವರಾಜ್ ಸಿನಿಮಾ ಪ್ರಪೋಸಲ್ ಇಟ್ಟಿದ್ದರು ಎಂದು ತಿಳಿಸಿದರು.

ಯುವರಾಜ್ ನಮ್ಮ ಕುಟುಂಬದ ಬಗ್ಗೆ ಭವಿಷ್ಯ ಹೇಳಿದ್ದರು. ನನ್ನ 16ನೇ ವಯಸ್ಸಿನಲ್ಲಿ ನನ್ನ ಜೀವನದಲ್ಲಿ ಆಗಲಿರುವ ಅನೇಕ ಬದಲಾವಣೆಗಳ ಬಗ್ಗೆ, ನನಗೆ ಹೆಣ್ಣು ಮಗುವಾಗುವ ಬಗ್ಗೆ ಕೂಡ ಆತ ಹೇಳಿದ್ದ. ಹೀಗಾಗಿ ಆತ ಸಿನಿಮಾ ನಿರ್ಮಾಣ ಮಾಡಬೇಕು ಅಂತ ಹೇಳಿದ್ದ ವೇಳೆಯಲ್ಲಿ ಒಪ್ಪಿಕೊಂಡಿದ್ದೇವು ಎಂದು ಹೇಳಿದರು.

ನಾನು ಎಲ್ಲೂ ಓಡಿ ಹೋಗಿಲ್ಲ, ಬೆಂಗಳೂರಿನಲ್ಲಿ ಇದ್ದೇನೆ. ನನ್ನ ಸಹೋದರ ಕೂಡ ಹಣಕಾಸಿನ ಸಂಬಂಧ ಹೊಂದಿಲ್ಲ. ಇದಲ್ಲದೇ ಯುವರಾಜ್ ಅವರೇ ನಮ್ಮನ್ನು ಭೇಟಿ ಮಾಡಿದರೇ ಹೊರತು ನಾವು ಅವರನ್ನು ಹುಡುಕಿಕೊಂಡು ಹೋಗಿ ಸಿನಿಮಾ ಮಾಡುವಂತೆ ಮನವಿ ಮಾಡಿಕೊಂಡಿಲ್ಲ ಎಂದು ಹೇಳಿದರು.

ನನ್ನ ಮೇಲಿನ ಆರೋಪಗಳನ್ನು ನಾನು ಎದುರಿಸಲು ಸಿದ್ದವಾಗಿದ್ದು, ನನ್ನ ತಾಯಿ ಇದರಿಂದ ತೀವ್ರವಾಗಿ ನೊಂದುಕೊಂಡಿದ್ದಾರೆ. ಆದರೆ, ಇದನ್ನು ನಾವು ಸಮರ್ಥವಾಗಿ ನಿಭಾಯಿಸುವೆ ಎಂದರು.

Exit mobile version