ಸುರೇಶ್ ಲಮಾಣಿ
ಲಕ್ಷ್ಮೇಶ್ವರ: ಸಂಚಾರ ಸುಗಮವಾಗಿದ್ದರೆ, ಎಲ್ಲವೂ ಸೌಖ್ಯ, ಆದರೆ ಅದೇ ಸಂಚಾರ ಸಂಕಟದಿಂದ ಕೂಡಿದರೆ ಸಂಚಕಾರ ಗ್ಯಾರಂಟಿ. ಅದೆಷ್ಟೋ ಜನರು ಗುತ್ತಿಗೆ ಪಡೆದು ರಸ್ತೆ ನಿರ್ಮಾಣದಲ್ಲಿ ಗುಣಮಟ್ಟಕ್ಕಿಂತ ಕಮಾಯಿ ಮಾಡಿಕೊಂಡಿದ್ದೇ ಜಾಸ್ತಿ. ಇನ್ನು ರಸ್ತೆ ನಿರ್ಮಾಣದ ನಂತರ ನಿರ್ವಹಣೆ ಮಾಡಬೇಕಾದವರು ಆ ಕಡೆ ಮುಖಾನೂ ಮಾಡಿಲ್ಲ. ಇಂತಹ ಅದೆಷ್ಟೋ ರಸ್ತೆಗಳಿಂದ ಜನಸಾಮಾನ್ಯರಿಗೆ ಸಂಚಕಾರಕ್ಕೆ ಸಂಚಕಾರ ಬಂದಿದೆ. ಹೀಗಾಗಿ ನಿಮ್ಮ ಉತ್ತರಪ್ರಭ ಗದಗ ಜಿಲ್ಲೆಯಲ್ಲಿನ ಇಂಥ ರಸ್ತೆಗಳ ಕುರಿತು ಸಂಚಿಕೆ ರೂಪದಲ್ಲಿ ಸುದ್ದಿ ಪ್ರಸಾರ ಮಾಡಲು ಮುಂದಾಗಿದೆ.
ನಾವೀಗ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಸ್ತೆಯೊಂದರ ಕಥೆ ಹೇಳ್ತಿವಿ. ಈ ರಸ್ತೆಯಲ್ಲಿ ಸಂಚಾರ ಕಷ್ಟ, ಕಷ್ಟ. ದೊಡ್ಡ ದೊಡ್ಡ ತಗ್ಗು ಗುಂಡಿಗಳು ವಾಹನ ಸವಾರರಿಗೆ ರಸ್ತೆ ಯಾವದೋ ಗುಂಡಿಗಳು ಯಾವದೋ ಎಂಬ ಲೆಕ್ಕಾಚಾರ ಸಿಗಲಾರದಷ್ಟು ರಸ್ತೆ ಹದಗೆಟ್ಟು ಹೋಗಿದೆ. ಮಳೆಯಾದರೆ ಸಾಕು ಕೆರೆಯಂತೆ ಕೆಸರಿನ ಗುಂಡಿಗಳು ನೀರು ತುಂಬಿಕೊಳ್ಳುತ್ತವೆ. ಬೇಸಿಗೆಯಲ್ಲಿ ಫುಲ್ ಧೂಳ್ ಧೂಳ್.
ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿಯಿಂದ ಬಡ್ನಿ ವರೆಗಿನ ರಸ್ತೆ. ಹದಗೆಟ್ಟ ರಸ್ತೆ ಸಂಪೂರ್ಣ ತಗ್ಗುಗುಂಡಿಗಳಿಂದ ಕೊಡಿದೆ. ಇನ್ನೂ ಈ ರಸ್ತೆಯಲ್ಲಿ ಸಂಚರಿಸುವ ಗ್ರಾಮಸ್ಥರ, ವಾಹನ ಸವಾರರ ಗೋಳು ಕೇಳೋರಿಲ್ಲ. ಈ ರಸ್ತೆಯಲ್ಲಿ ಶಾಲೆ, ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಓಡಾಡುವುದು ಸವಾಲಾಗಿದೆ. ಅಡರಕಟ್ಟಿಯಿಂದ ಬಡ್ನಿವರೆಗಿನ-ರಸ್ತೆ ಎರಡು ವರ್ಷಗಳ ಹಿಂದೆ ಮಾಡಲಾಗಿದೆ. ಈ ರಸ್ತೆಗೆ 15 ದಿನಗಳ ಹಿಂದೆಯೇ ರಸ್ತೆಯ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರು ಮಣ್ಣನ್ನು ಬಳಸಿ ಗುಂಡಿಗಳನ್ನು ಮುಚ್ಚಿದರು. ಅದು ಕಾಟಾಚಾರಕ್ಕೆ ಮಾತ್ರ ಎನ್ನುವಂತಿದೆ. ಈ ರಸ್ತೆ ಮಾರ್ಗವಾಗಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈ ಮಾರ್ಗವಾಗಿ ಆದರಹಳ್ಳಿ ಬೆಳ್ಳಟ್ಟಿ, ಕೊಂಡಿಕೊಪ್ಪ, ಹರದಗಟ್ಟಿ, ದೇವಿಹಾಳ ಸೇರಿ ಇನ್ನೂ ಅನೇಕ ಗ್ರಾಮಗಳಿಗೆ ಸಂಚರಿಸುತ್ತವೆ.
ಡಾಂಬರೀಕರಣಗೊಂಡ ಈ ರಸ್ತೆ ಈಗ ಮಣ್ಣಿನ ರಸ್ತೆಯಾಗಿದೆ. ರಸ್ತೆಯ ಪ್ರದೇಶ ಸ್ವಲ್ಪ ತಗ್ಗಿನಿಂದ ಕೂಡಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತದೆ. ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದರೆ ಪ್ರತಿ ವರ್ಷ ದುರಸ್ತಿ ಮತ್ತು ನಿರ್ವಹಣೆಗೆ ಸಾಕಷ್ಟು ಅನುದಾನ ದೊರಕುತ್ತದೆ ಎಂಬುದು ಹಾಗೂ ಗುತ್ತಿಗೆದಾರರ ನಿರ್ವಣೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಶೀಘ್ರ ದುರಸ್ಥಿ ರಸ್ತೆ ದುರಸ್ಥಿ ಬಗ್ಗೆ ಗಮನಕ್ಕೆ ಬಂದಿದೆ. ಗುತ್ತಿಗೆದಾರರಿಗೆ ನಿರ್ವಹಣೆ ಮಾಡುವ ಬಗ್ಗೆ ತಿಳಿಸಿ ಶೀಘ್ರ ರಸ್ತೆ ದುರಸ್ಥಿ ಕೈಗೊಳ್ಳುವಂತೆ ಸೂಚಿಸಲಾಗುವದು. – ನರೇಂದ್ರ ಡಿ.ಬಿ, ಲೋಕೊಪಯೋಗಿ ಇಲಾಖೆ ಅಧಿಕಾರಿ
ಮಳೆಗಾಲದ ಸಂದರ್ಭ ಇಲ್ಲಿ ಓಡಾಡುವವರಿಗೆ ಕೆಸರಿನ ಜಳಕ ಕಾಯಂ. ರಸ್ತೆ ಪಕ್ಕದಲ್ಲಿ ಪೊದೆ ಬೆಳೆದ ಕಾರಣ ಪಾದಾಚಾರಿ ಮಾರ್ಗ ಸಹ ಇಲ್ಲವಾಗಿದೆ. ವಿಶೇಷ ಅನುದಾನದಡಿ ಈ ರಸ್ತೆ ದುರಸ್ತಿಗೊಂಡು ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿದೆ. ಹೆಚ್ಚು ಜನ ಬಳಕೆಯ ರಸ್ತೆ ಇದು. ರಸ್ತೆ ದುರಸ್ತಿಗೆ ಸಂಬಂಧಿಸಿದ ಅಧಿಕಾರಿಗಳು ಕಾಳಜಿ ವಹಿಸಬೇಕು. ಕೇವಲ ಕಮಾಯಿಗಾಗಿ ಕಾಮಗಾರಿ ಮಾಡಿದ್ರೆ ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಅನ್ನೋದು ಸ್ಥಳೀಯರ ಒತ್ತಾಯ.
