ಗದಗ: ನಾಡಿನಲ್ಲಿ ಪ್ರಮುಖವಾಗಿ ಆಚರಿಸುವ ದೊಡ್ಡ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಆದರೆ ಬೆಳಕಿನ ಹಬ್ಬ ಸಾರಿಗೆ ಸಿಬ್ಬಂದಿಗಳಿಗೆ ಮಾತ್ರ ಕತ್ತಲಲ್ಲಿಟ್ಟಂತಾಗಿದೆ.
ಈಗಾಗಲೇ ಲಾಕ್ ಡೌನ್ ನಿಂದ ಸಾರಿಗೆ ನೌಕರರು ಒಂದಲ್ಲ, ಒಂದು ಸಮಸ್ಯೆಯನ್ನು ಅನುಭವಿಸುತ್ತಲೇ ಇದ್ದಾರೆ. ಸಂಬಳ ಪಡಿಯಬೇಕಾದರೇ ಅದೆಷ್ಟೋ ಬಾರಿ ಸಂಕಷ್ಟ ಅನುಭವಿಸಿದ್ದಾರೆ. ಆದರೂ ಸಾರಿಗೆ ಸಿಬ್ಬಂಧಿಗಳ ಗೋಳಾಟ ಅಂತ್ಯವಾಗುತ್ತಿಲ್ಲ.
ಮನೆಗೆ ಬಂದ ಅಪ್ಪನನ್ನು ಅಪ್ಪಾ..!, ಒಂದು ಪ್ಯಾಂಟ್ ಷರ್ಟ್ ಕೊಡಿಸಪ್ಪ ಅಂತ ಕೇಳೊ ಮಗ, ಅಪ್ಪಾ.. ಅಪ್ಪಾ ನಂಗೊಂದು ಮೀಡಿ ಕೊಡಿಸು ಅಂತ ಕೇಳೊ ಮಗಳು, ರೀ, ದೀಪಾವಳಿ ಬಂತು ನಂಗೆ ಈ ಬಾರಿ ಸೀರೆ ಬೇಡ ಚಿನ್ನ ಕೊಡಿಸಿ ಅಂತ ಹೇಳೊ ಹೆಂಡತಿ. ಇಷ್ಟೆಲ್ಲ ಬೇಡಿಕೆಗಳನ್ನು ಇಡೇರಿಸಬೇಕು ಎನ್ನುವ ಸಾರಿಗೆ ಸಿಬ್ಬಂದಿಗೆ ಜೇಬಿನಲ್ಲಿ ನಯಾ ಪೈಸೆ ಇಲ್ಲದಂತಾಗಿದೆ. ಹೆಂಡತಿ, ಮಕ್ಕಳ ಆಸೆಯನ್ನು ವರ್ಷಕ್ಕೊಮ್ಮೆಯಾದರೂ ಈಡೇರಿಸಲು ಆಗುತ್ತಿಲ್ಲವಲ್ಲ ಎನ್ನುವ ಕೊರಗಿದೆ.
ತಿಂಗಳಾದರೆ ಸಾಕು ಕೈಸೇರುವ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡುವಷ್ಟರಲ್ಲಿ ಸಾರಿಗೆ ನೌಕರರು ಹೈರಾಣಾಗುತ್ತಾರೆ. ಇನ್ನು ಇದರ ಜೊತೆಗೆ ವರ್ಷಕ್ಕೊಮ್ಮೆಯಾದರೂ ಮನೆ ಮಂದಿಯ ಮುಖದಲ್ಲೊಂದು ಕಿರು ನಗೆ ನೋಡಬೇಕು ಎಂದುಕೊಂಡರೆ ಈ ಬಾರಿಯ ದೀಪಾವಳಿಯಲ್ಲಿ ಸಾರಿಗೆ ಸಿಬ್ಬಂದಿಗಳ ಕುಟುಂಬದ ಭರವಸೆಗಳು ಕನಸ್ಸಾಗಿಯೇ ಉಳಿದಿವೆ.
ಸಂಬಂಧ ಪಟ್ಟ ಇಲಾಖೆ ಸಿಬ್ಬಂದಿಗಳ ಸೇವೆ ಪಡೆದರೆ ಮಾತ್ರ ಸಾಕೇ? ಅವರ ವೈಯಕ್ತಿಕ ಬದುಕಿನ ಬಗ್ಗೆಯೂ ಯೋಚಿಸುವ ಸೌಜನ್ಯ ಸಂಸ್ಥೆ ತೋರಬೇಕಿತ್ತು. ಆದರೆ ಸಾರಿಗೆ ಇಲಾಖೆಯ ಈ ನಿಷ್ಕಾಳಜಿಯಿಂದ ಇಂದು ರಾಜ್ಯದ ಅದೆಷ್ಟೋ ಕುಟುಂಬಗಳಲ್ಲಿ ದೀಪಾವಳಿಯ ಬೆಳಕು ಈ ವರ್ಷ ಕಾಣದಾಗಿದೆ.
ಜಿಲ್ಲೆಯಲ್ಲಿ 2500 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿದ್ದಾರೆ. ಜಿಲ್ಲೆಯಲ್ಲಿಯೇ ಪ್ರತಿ ತಿಂಗಳ ಸಾರಿಗೆ ನೌಕರರಿಗೆ ಅಂದಾಜು 4 ಕೋಟಿ ವರೆಗೆ ಸಂಬಳ ನೀಡಬೇಕಾಗಿದೆಯಂತೆ. ಈ ಲೆಕ್ಕಾಚಾರದಲ್ಲಿ ರಾಜ್ಯದ ಸಾರಿಗೆ ಇಲಾಖೆಯ ನಾಲ್ಕು ವಿಭಾಗಗಳ ಸಂಬಳದ ಲೆಕ್ಕಾಚಾರ ಎಷ್ಟಾಗಬಹುದು?
ದೊಡ್ಡ ಹಬ್ಬ
ಹಿಂದೂಗಳ ದೊಡ್ಡ ಹಬ್ಬ ದೀಪಾವಳಿ. ಯಾವ ಹಬ್ಬದಲ್ಲಿ ಬಟ್ಟೆ, ಬರೆ ಖರೀದಿಸದಿದ್ದರೂ, ದೀಪಾವಳಿಯಲ್ಲಿ ಮಾತ್ರ ಎಲ್ಲರೂ ಬಟ್ಟೆ, ಬಂಗಾರ ಖರೀದಿಸುವಲ್ಲಿ ಆತುರದಲ್ಲಿ ಇರುತ್ತಾರೆ. ಆದರೆ ಸಾರಿಗೆ ಇಲಾಖೆ ನಿಗದಿತ ಸಮಯಕ್ಕೆ ಸಂಬಳ ನೀಡದ ಕಾರಣ. ಗದಗ ಜಿಲ್ಲೆಯ 2500 ಸಿಬ್ಬಂದಿಗಳಿಗೆ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಭಾಗ್ಯ ಕೂಡಿ ಬಂದಿಲ್ಲ. ನೌಕರರ ಬಗ್ಗೆ ಕನಿಷ್ಟ ಕಾಳಜಿ ಇಲ್ಲದೇ ಹೋದರೇ ಹೇಗೆ? -ರವಿಕಾಂತ ಅಂಗಡಿ, ಸಾರಿಗೆ ನೌಕರರ ಮಹಾ ಮಂಡಳದ ಜಿಲ್ಲಾ ಗೌರವಾಧ್ಯಕ್ಷ
ಹಬ್ಬಕ್ಕೆಂದು ತವರಿಗೆ ಹೋಗುವ ಹೆಣ್ಣಿನ ಸಂಭ್ರಮ, ಪೇಟೆಗೆ ಬಂದು ಹಬ್ಬದ ಬಟ್ಟೆ ಖರೀದಿ ಮಾಡಿಕೊಂಡು ಹೋಗುವವರ ಸಡಗರ ಇದೆಲ್ಲವನ್ನು ನಿತ್ಯ ಬಸ್ ನಲ್ಲಿ ಕಣ್ಣಾರೆ ಕಂಡಾಗ ಪಾಪ, ಹತ್ತಿರದಿಂದ ನೋಡಿದ ಡ್ರೈವರ್, ಕಂಡಕ್ಟರ್ ಗಳಿಗೆ ಮನಸ್ಸಿಗೆ ಎಷ್ಟು ನೋವಾಗಿರಬೇಕು. ಇಂತಹ ಸೂಕ್ಷ್ಮತೆ ಸಾರಿಗೆ ಇಲಾಖೆಗೆ ಏಕೆ ಗೊತ್ತಾಗಲಿಲ್ಲ. ಪ್ರತಿ ತಿಂಗಳ 10 ನೇ ತಾರಿಖಿಗೆ ಸಾರಿಗೆ ನೌಕರರಿಗೆ ಸಂಬಳ ಆಗುತ್ತದೆ. ದೀಪಾವಳಿ ಹಬ್ಬ ಬಂದಾಗ ಮಾತ್ರ ಮುಂಗಡ ಸಂಬಳ ನೀಡಲಾಗುತ್ತಿತ್ತು. ಈ ಬಾರಿ ಮುಂಗಡ ಸಂಬಳ ನೀಡದಿದ್ದರೂ ಏನಾಯ್ತು ಕನಿಷ್ಟ ನಿಗದಿತ ದಿನಾಂಕದಂತೆ 10 ನೇ ತಾರಿಖಿಗಾದರೂ ನೀಡಿದ್ದರೆ, ಬೆಳಕಿನ ಹಬ್ಬ ಸಾರಿಗೆ ನೌಕರರ ಕುಟುಂಬದಲ್ಲಿ ಬೆಳಕಿನ ಹೊನಲು ಮೂಡಿಸುತ್ತಿತ್ತು.
ಈ ಬಗ್ಗೆ ಪ್ರತಿಕ್ರಿಯೇಗಾಗಿ ಹುಬ್ಬಳ್ಳಿ ವಿಭಾಗ ಹಾಗು ಗದಗ ಜಿಲ್ಲೆ ಸಂಸ್ಥೆಯ ಅಧಿಕಾರಿಗಳ ಪ್ರತಿಕ್ರಿಯೇಗಾಗಿ ಕರೆ ಮಾಡಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.
ಈ ವರ್ಷ ಇಲಾಖೆ ಆರ್ಥಿಕ ಸಂಕಷ್ಟಕ್ಕಿದೆ. ಹೀಗಾಗಿ ಸಂಕಷ್ಟ ನಿವಾರಣೆಗೆ ಹಲವು ಬದಲಾವಣೆ ಮಾಡಿದಾಗಲೂ ಕರ್ತವ್ಯ ನಿಷ್ಟೆ ತೋರುತ್ತಿರುವ ಸಿಬ್ಬಂಧಿಗಳ ಬಗ್ಗೆಯೂ ಸಾರಿಗೆ ಇಲಾಖೆ ಯೋಚಿಸಬೇಕಲ್ಲವೇ? ಈಗ ಸಂಬಳ ಕೊಡಬೇಕೆಂದರೂ ಸಿಬ್ಬಂದಿಗಳ ಪಾಲಿಗೆ ಮತ್ತೆ ಮುಂದಿನ ದೀಪಾವಳಿಯೇ. ಏಕೆಂದರೆ ಮೂರು ದಿನ ಬ್ಯಾಂಕ್ ರಜೆ ಇರುವ ಕಾರಣ ಇಲಾಖೆ ಸಂಬಳ ನೀಡುತ್ತಾದರೂ ಹೇಗೆ? ಇಂತಹ ದೂರದೃಷ್ಟಿ ಆಲೋಚನೆ, ಸಿಬ್ಬಂದಿಗಳ ಬಗ್ಗೆ ಕನಿಷ್ಟ ಕಾಳಜಿ ಸಾರಿಗೆ ಇಲಾಖೆ ಮರೆತು ಹೋಯಿತೆ?
