ಬೆಂಗಳೂರು: ಈಗಾಗಲೇ ಸಾರಿಗೆ ಇಲಾಖೆಯ 2000 ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸುತ್ತಿದೆ. ಇದರಿಂದ ಖಾಯಂ ನೌಕರರಿಗೂ ಆತಂಕ ಎದುರಾಗಿದೆ. ಇದೇ 08-06-2020 ರಂದು ಸಾರಿಗೆ ಸಂಸ್ಥೆಯ ಸ್ವಯಂ ನಿವೃತ್ತಿ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ಸುತ್ತೋಲೆ ಹೊರಡಿಸಿದ್ದಾರೆ. ದೈಹಿಕ ಅಸಮರ್ಥಗೊಂಡ ನಿಗಮದ ಅಧಿಕಾರಿಗಳು ನೌಕರರು ಸ್ವಯಂ ನಿವೃತ್ತಿ ಪಡೆಯುವುದಕ್ಕೆ ಅವಕಾಶ ಮಾಡಿರುವ ಬಗ್ಗೆ ಆದೇಶಿಸಲಾಗಿದೆ. ಈ ಬಗ್ಗೆ ಉತ್ತರಪ್ರಭ ವರದಿ ಕೂಡ ಮಾಡಿತ್ತು. ಸ್ವಯಂ ನಿವೃತ್ತಿ ಯೋಜನೆಯ ಬಗ್ಗೆ ಆಳವಾಗಿ ಯೋಚಿಸಿದಾಗ ಮತ್ತೆ ಸಾರಿಗೆ ಸಂಸ್ಥೆಯ ನೌಕರರ ನೌಕರಿಗೆ ಆಪತ್ತು ಇದೆಯೇ? ಎನ್ನುವ ಸಂದೇಹ ಮೂಡದೇ ಇರಲಾರದು.
ಸಾರಿಗೆ ನೌಕರರಿಗೆ ಸ್ವಯಂ ನಿವೃತ್ತಿಯ ಆಮಿಷ..!
ಸದ್ಯ ಕೆಲಸ ನಿರ್ವಹಿಸಲು ಆರೋಗ್ಯ ಸಮಸ್ಯೆ ಯಿಂದ ತೀರಾ ಕಷ್ಟಪಡುವ ಸಿಬ್ಬಂದಿಗಳಿಗೆ ಈ ಯೋಜನೆ ಬಹಳಷ್ಟು ಉಪಕಾರಿ. ಆದರೆ ಇದೀಗ 40-50 ವರ್ಷ ಸೇವೆ ಸಲ್ಲಿಸಿದವರ ಗತಿ ಏನು?
ಎಲ್ಲಾ ವರ್ಗದ ಅಧಿಕಾರಿಗಳು ನೌಕರರು ಸ್ವಯಂ ನಿವೃತ್ತಿ ಪಡೆಯಲು ಅರ್ಹರಾಗಿದ್ದು, ಸ್ವಯಂ ನಿವೃತ್ತಿ ಪಡೆದರೆ ಆಕರ್ಷಕ ಸೌಲಭ್ಯ ಕೊಡಲಾಗುವುದು ಎಂದು ಆಸೆ ಹುಟ್ಟಿಸುವ ಕೆಲಸ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸ್ವಯಂ ನಿವೃತ್ತಿ ಯೋಜನೆ ನಿರ್ಧಾರಕ್ಕೆ ಆಡಳಿತಾತ್ಮಕ ಕಾರಣ ಎಂದು ಸ್ವತ: ಇಲಾಖೆಯೇ ಒಪ್ಪಿಕೊಂಡಿದೆ.
ಆಡಳಿತಾತ್ಮಕ ಕಾರಣ ಎಂದರೆ ಏನಿರಬಹುದು..?
ಆಡಳಿತಾತ್ಮಕ ಕಾರಣದ ನೆಪ ನೀಡಿ ಸ್ವಯಂ ನಿವೃತ್ತಿ ಯೋಜನೆ ಬಗ್ಗೆ ಇಲಾಖೆ ಆದೇಶ ನೀಡಿದೆ. ಇಲಾಖೆ ಆರ್ಥಿಕ ಸಂಕಷ್ಟವೇ ಆಡಳಿತಾತ್ಮಕ ಕಾರಣ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಲಾಕ್ ಡೌನ್ ಹಿನ್ನೆಲೆ ಬಸ್ ಸಂಚಾರ ಬಂದ್ ಆದ ಕಾರಣ ಮೂರು ತಿಂಗಳಿಂದ ಸಂಸ್ಥೆಗೆ ಆದಾಯ ಬಂದ್ ಆಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್.ಡಬ್ಲೂ.ಕೆ.ಆರ್.ಟಿ.ಸಿ, ಎನ್.ಇ.ಕೆ.ಆರ್.ಟಿ.ಸಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ತಿಂಗಳ ವೇತನಕ್ಕೆ ಅಂದಾಜು 320 ಕೋಟಿಗೂ ಅಧಿಕ ಹಣಬೇಕು.
ಮೂರು ತಿಂಗಳ ಸಂಸ್ಥೆಗೆ ಆದಾಯವಿಲ್ಲದಿದ್ದರೂ ಅಂದಾಜು 1000 ಕೋಟಿ ಯಷ್ಟು ಸಿಬ್ಬಂಧಿಗಳ ವೇತನದ ಹೊರೆ ಬಿದ್ದಿದೆ. ಸಿಬ್ಬಂದಿಗಳಿಗೆ ವೇತನ ನೀಡಲು ಸಹಾಯ ಮಾಡುವಂತೆ ಸಾರಿಗೆ ಸಚಿವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಕಳೆದ ಮೂರು ತಿಂಗಳು ಅರ್ಧದಷ್ಟು ಹಣವನ್ನು ರಾಜ್ಯ ಸರ್ಕಾರವೇ ನೀಡಿತ್ತು. ಮೇ ತಿಂಗಳ ಸಂಬಳಕ್ಕಾಗಿ ಸರ್ಕಾರ 325 ಕೋಟಿ ವಿಶೇಷ ಅನುದಾನ ನೀಡಿದೆ ಎಂದು ತಿಳಿದು ಬಂದಿದೆ.
ಇದು ಬಿಎಂಟಿಸಿ ನೌಕರರಿಗೂ ಅನ್ವಯ
ಈ ಸಮಸ್ಯೆ ಕೇವಲ ಕೆಎಸ್ಆರ್ಟಿಸಿ ನೌಕರರಿಗೆ ಮಾತ್ರವಲ್ಲ. ಬಿಎಂಟಿಸಿಯಲ್ಲೂ ಸ್ವಯಂ ನಿವೃತ್ತಿ ಯೋಜನೆ ನಿಯಮ ಜಾರಿ ಮಾಡಲು ಸಿದ್ಧತೆಗಳು ನಡೆಯುತ್ತಿದ್ದು, ಈಗ ಕೆಲಸ ಬಿಟ್ಟು ಹೋದರೆ ಕಾಸು ಸಿಗುತ್ತೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ ಎನ್ನುವ ಮಾತುಗಳು ಅಧಿಕಾರಿಗಳ ವಲಯದಿಂದ ಬರುತ್ತಿದೆ ಎನ್ನಲಾಗಿದೆ.
ಗುತ್ತಿಗೆ ನೌಕರರು ಮನೆಗೆ..!
ಈಗಾಗಲೇ ಸಾರಿಗೆ ಸಂಸ್ಥೆ ರಾಜ್ಯದ 2000 ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸಲು ಸಿದ್ಧತೆ ಪೂರ್ಣಗೊಂಡಿದೆ. ಇದರಿಂದ ಈಗಾಗಲೇ ಗುತ್ತಿಗೆ ನೌಕರರಿಗೂ ಆತಂಕ ಶುರುವಾಗಿದ್ದು ಸ್ವತ: ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮನ್ನು ಕೆಲಸದಿಂದ ಕೈಬಿಡದಂತೆ ಒತ್ತಾಯಿಸಿದ್ದಾರೆ. ಆದರೆ ಇಲಾಖೆ ಈಗಾಗಲೇ ಬಹುತೇಕ ಗುತ್ತಿಗೆ ನೌಕರರಿಗೆ ನೋಟಿಸ್ ಕೂಡ ನೀಡಿದೆ ಎಂದು ತಿಳಿದು ಬಂದಿದೆ. ಇದರಿಂದ ಈಗಾಗಲೇ 2000 ಗುತ್ತಿಗೆ ಸಿಬ್ಬಂದಿಗಳ ಬದುಕು ಬೀದಿಗೆ ಬಂದಾಯ್ತು. ಇನ್ನು ಖಾಯಂ ನೌಕರರ ಸ್ಥಿತಿ ಇದಕ್ಕಿಂತ ಘೋರವಾಗುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟದಿಂದ ಸಂಸ್ಥೆಯನ್ನು ಚೇತರಿಕೆ ಮಾಡುವುದು ಸವಾಲಿನ ಕೆಲಸವಾಗಿದೆ. ಇದರಿಂದ ನೌಕರರ ವೃತ್ತಿಗೆ ಕುತ್ತು ಬಂದಿದೆ. ಅಧಿಕಾರಿಗಳಿಗೂ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುವುದು ಸವಾಲಿನ ಸಂಗತಿಯೇ ಸರಿ. ಯಾವ ನೌಕರರ ನೌಕರಿಗೂ ಆಪತ್ತು ಬರದಂತೆ, ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುವುದರತ್ತ ಈ ಸವಾಲನ್ನು ಸಂಸ್ಥೆ ಎದುರಿಸಿದರೆ ಎಲ್ಲರಿಗೂ ಅನುಕೂಲ ಎನ್ನುವುದು ಸಾರಿಗೆ ಸಿಬ್ಬಂಧಿಗಳ ಅಭಿಪ್ರಾಯ.