ಗಜೇಂದ್ರಗಡ: ಪಟ್ಟಣದ ಸರ್ಕಾರಿ ಸ್ನಾತಕೋತ್ತರ ಪದವಿ ಕೇಂದ್ರ ಸ್ಥಾಪಿಸಲು ಹಾಗೂ ಸರಕಾರಿ ಬಾಲಕರ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರಾರಂಭಿಸಲು ಸೇರಿದಂತೆ ಇನ್ನಿತರ ಶೈಕ್ಷಣಿಕ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಕಾರ್ಯಕರ್ತರು ಶಾಸಕರಿಗೆ ಮನವಿ ಸಲ್ಲಿಸಿದರು.
ಗಜೇಂದ್ರಗಡ ಪಟ್ಟಣ ತಾಲೂಕಾ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿಯ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದು ತಮ್ಮ ಉನ್ನತ ವ್ಯಾಸಂಗಕ್ಕಾಗಿ ಬೇರೆ ಜಿಲ್ಲೆಗಳ ಮೇಲೆ ಅವಲಂಭಿತರಾಗಿದ್ದಾರೆ. ಪಟ್ಟಣದಲ್ಲಿ 4 ರಿಂದ 5 ಡಿಗ್ರಿ ಕಾಲೇಜುಗಳು 6 ಪಿಯು ಕಾಲೇಜ ತಾಲೂಕಿನ ವ್ಯಾಪ್ತಿಯಲ್ಲಿ ಇನ್ನೂ ಅನೇಕ ಕಾಲೇಜುಗಳು ಮತ್ತು ಹತ್ತು ಹಲವಾರು ಪ್ರೌಢ ಶಾಲೆಗಳಿವೆ.
ಆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ದೂರದ ನಗರಗಳಿಗೆ ಹೋಗುವ ಅನಿವಾರ್ಯತೆ ಇದೆ. ಈ ತೊಂದರೆಯಿAದಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದೂರದ ನಗರ ಪ್ರದೇಶಗಳಲ್ಲಿ ಹಾಸ್ಟೆಲ್ ಸಿಗದೇ ಉನ್ನತ ಶಿಕ್ಷಣ ಒಂದು ರೀತಿಯಲ್ಲಿ ಹೊರೆಯಾಗಿ ಪರಿಣಿಮಿಸಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ಜೊತೆಗೆ ಚರ್ಚಿಸಿ ಪಟ್ಟಣದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ ತೆರೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ತೆರೆಯಬೇಕು. ವಿದ್ಯಾರ್ಥಿ ವೇತನ ಬಿಡುಗಡೆಗೆ ಕ್ರಮ ವಹಿಸಬೇಕು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಡೇ ಕಾಲರ್ ಶೀಫ್ ನೀಡಬೇಕು. ಶುಲ್ಕವನ್ನು ಸರ್ಕಾರವೇ ಭರಿಸಬೇಕು ಮತ್ತು ಶೈಕ್ಷಣಿಕ ತುರ್ತು ಪರಿಸ್ಥಿತಿ ಘೋಷಿಸಿ ಶೈಕ್ಷಣಿಕ ವಲಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಕ್ಯಾಂಪಸ್ ಹತ್ಯೆ ತಡೆಯಲು ರೋಹಿತ್ ಕಾನೂನು ರೂಪಿಸಿ ಜಾರಿ ಮಾಡಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳು ಏಗ್ಗಿಲ್ಲದೆ ನಡೆಸುತ್ತಿರುವ ಶುಲ್ಕ ವಸೂಲಾತಿಯನ್ನು ತಡೆಗಟ್ಟಬೇಕು. ಗಜೇಂದ್ರಗಡದಲ್ಲಿ ಸರ್ಕಾರಿ ಪಿಜಿ ಸೆಂಟರ್ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಶಾಸಕ ಕಳಕಪ್ಪ ಬಂಡಿ ಮನವಿ ಸ್ವೀಕರಿಸಿದರು. ಗಣೇಶ ರಾಠೋಡ, ಶಿವಾನಂದ ಬೊಸ್ಲೆ, ವಿರೇಶ ಬೆನಹಾಳ, ಚಂದ್ರು ರಾಠೋಡ, ಅರ್ಜುನ್ ರಾಠೋಡ, ರಾಜೇಶ ಕದಡಿ, ಆಸೀಫ್ ನದಾಫ್, ವಿರೇಶ ರಾಠೋಡ, ಕನಕಮ್ಮ ಮಾದರ, ಬಿಮೇಶ ರಾಠೋಡ, ನಜೀರ ಪಿಂಜಾರ, ಶರಣಪ್ಪ ರಾಠೋಡ, ರಾಜು ರಾಠೋಡ, ಕನಕಪ್ಪ ಮಾದರ ಇತರರು ಇದ್ದರು.