ಹೊಳೆ ಆಲೂರು: ಇಲ್ಲಿನ ಮಲಪ್ರಭ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆ ಹೊಳೆಯಾಲೂರು ಗ್ರಾಮದಲ್ಲಿ ಮೊಸಳೆ ಪತ್ತೆಯಾಗಿತ್ತು. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು. ಇನ್ನು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿದ್ದರು. ನದಿ ದಡಕ್ಕೆ ಹೋಗದಂತೆ ಗ್ರಾಮ ಪಂಚಾಯತಿ ವತಿಯಿಂದ ಡಂಗುರ ಸಾರಲಾಗಿತ್ತು. ಆದರೆ ಇಂದು ಅದೇ ಸ್ಥಳದಲ್ಲಿ ಮೊಸಳೆಯ ಮೃತದೇಹ ಪತ್ತೆಯಾಗಿದ್ದು, ಬುಧುವಾರ ಇಲ್ಲಿ ಕಾಣಿಸಿಕೊಂಡ ಮೊಸಳೆ ಸಾವನ್ನಪ್ಪಿದಾಗಿರಬಹುದು ಎನ್ನಲಾಗಿದೆ.
ಹೊಳೆ ಆಲೂರು ಗ್ರಾಮದ ಮಲಪ್ರಭ ನದಿ ದಡದಲ್ಲಿ ಪತ್ತೆಯಾದ ಮೊಸಳೆ ಮೃತದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗು ಗ್ರಾಮಸ್ಥರು ಹೊರತೆಗೆದರು. ಆದರೆ ಇತ್ತಿಚೆಗೆ ಜನರ ಕಣ್ಣಿಗೆ ಬಿದ್ದ ಮೊಸಳೆ ಇದೆನಾ? ಎನ್ನುವ ಚರ್ಚೆ ಒಂದೆಡೆಯಾಗಿದೆ. ಇನ್ನು ಮತ್ತೊಂದೆಡೆ ಮೊಸಳೆ ಸಾವಿನ ಬಗೆಗೆ ಹತ್ತು ಹಲವು ಅನುಮಾನಗಳು ಮೂಡಿವೆ. ಮೊಸಳೆಯ ಶವ ಪರೀಕ್ಷೆ ನಂತರ ಈ ಬಗ್ಗೆ ನಿಖರ ಕಾರಣ ಗೊತ್ತಾಗಬೇಕಿದೆ.