ಪ್ರಧಾನಿ ಕಚೇರಿಯ ಆದೇಶಕ್ಕೂ ಇಲ್ಲಿ ಸಿಗುತ್ತಿಲ್ಲ ಗೌರವ!

ಚಿತ್ರದುರ್ಗ : ರಾಜ್ಯ ಸೇರಿದಂತೆ ದೇಶದಲ್ಲಿನ ಇನ್ನೂ ಹಲವು ಗ್ರಾಮಗಳು ಅಭಿವೃದ್ಧಿಯಿಂದ ಹಿಂದೆ ಉಳಿದಿವೆ. ಕೆಲವು ಗ್ರಾಮಗಳಲ್ಲಿನ ಪರಿಸ್ಥಿತಿಗಳಂತೂ ಹೇಳತೀರದಾಗಿದೆ.

ಜಿಲ್ಲೆಯಲ್ಲಿನ ಬಹುತೇಕ ಗ್ರಾಮಗಳ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ಹಿರಿಯೂರು ತಾಲೂಕಿನ ಶೇಷಪ್ಪನಹಳ್ಳಿ ಕೂಡ ಇದೇ ಸಾಲಿಗೆ ಬಂದು ನಿಂತಿದೆ. ಮೂಲಭೂತ ಸೌಲಭ್ಯಗಳನ್ನು ದೊರಕಿಸುವಂತೆ ಸ್ಥಳೀಯ ಶಾಸಕರಿಗೆ, ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ಕ್ಯಾರೇ ಎನ್ನುತ್ತಿಲ್ಲ.

ಹಾಳಾದ ಗ್ರಾಮದ ವ್ಯವಸ್ಥೆ ಕಂಡು ಬೇಸತ್ತ ಗ್ರಾಮದ ಕಿರಣ್ ಎಸ್.ಪಿ ಎಂಬ ಯುವಕ, ಪ್ರಧಾನಿ ಕಚೇರಿಗೆ ಆನ್ ಲೈನ್ ಮೂಲಕ ದೂರು ನೀಡಿದ್ದರು. ಯುವಕನ ದೂರಿಗೆ ಸ್ಪಂದನೆ ಕೂಡ ದೊರೆಕಿತ್ತು. ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಸೂಚನೆ ನೀಡಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಇನ್ನೂ ತಲೆ ದೋರುತ್ತಿದೆ.

ಪ್ರಧಾನಿ ಕಾರ್ಯಾಲಯದಿಂದ ಕ್ರಮಕೈಗೊಳ್ಳಲು ಸೂಚನೆ ನೀಡಿದರೂ, ಸ್ಥಳೀಯ ಅಧಿಕಾರಿಗಳು ಕಿಮ್ಮತ್ತು ಕೊಡುತ್ತಿಲ್ಲ ಎಂದು ಪ್ರಧಾನಮಂತ್ರಿಗಳ ಕಚೇರಿ ಆದೇಶ ಲಗತ್ತಿಸಿ ಯುವಕ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version