ಗದಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತಂತ್ರ-ಕುತಂತ್ರಗಳನ್ನು ಬಿಜೆಪಿ ಪಕ್ಷ ಛಿದ್ರ ಮಾಡುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಗದಗನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಚಕ್ರವ್ಯೂಹದಲ್ಲಿ ಸಿಲುಕಿದಂತಾಗಿದೆ. ಈಗಾಗಲೇ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಅವರ ಕ್ಷೇತ್ರ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿಯೂ ಚುನಾವಣೆ ನಡೆದಿದೆ. ಅಲ್ಲಿಯೂ ಕೂಡ ಈ ಬಾರಿ ಬಿಜೆಪಿ ಅಬ್ಯರ್ಥಿ ಗೆಲವು ನಿಶ್ಚಿತವಾಗಿದೆ ಎಂದರು.
ಈ ಕಾರಣದಿಂದಾದಿ ಡಿಕೆಶಿ ಹತಾಶರಾಗಿ ಏನೇನೋ ಮಾತಾಡುತ್ತಿದ್ದಾರೆ. ಒಂದು ಅರ್ಥದಲ್ಲಿ ಡಿಕೆಶಿ ಚಕ್ರವ್ಯೂಹದಲ್ಲಿ ಸಿಕ್ಕಾಕಿಕೊಂಡಂತಾಗಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸೇರಿ 6 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. 6 ಕ್ಷೇತ್ರಗಳಲ್ಲಿ ಬಿಜೆಪಿ ಅಬ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪರ್ಧಿಸಲು ಅಬ್ಯರ್ಥಿಗಳೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಿರಾ ಉಪ ಚುನಾವಣೆಯಲ್ಲಿ ಈ ಬಾರಿಯೂ ಜಯಚಂದ್ರ ಅವರಿಗೆ ಸೋಲು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ನಾನು ಇಷ್ಟಪಟ್ಟ ಖಾತೆ
ಈ ಮೊದಲೇ ನಾನು ಮುಖ್ಯಮಂತ್ರಿಗಳಿಗೆ ಸಮಾಜ ಕಲ್ಯಾಣ ಇಲಾಖೆ ನೀಡುವಂತೆ ಮನವಿ ಮಾಡಿಕೊಂಡಿದ್ದೆ. ಆದರೆ ಈಗ ನಾನು ಇಷ್ಟಪಟ್ಟ ಖಾತೆಯೇ ನನಗೆ ಸಿಕ್ಕಿದೆ. ಈಗಾಗಲೇ ರಾಜ್ಯದಲ್ಲಿ ಸಮಾಜ ಕಲ್ಯಾಣ ಖಾತೆ ನಿರ್ವಹಿಸಿದವರು ಮಾಡಿದ ಕಾರ್ಯಗಳನ್ನು ಅದ್ಯಯನ ಮಾಡಿ ಹತ್ತು ವರ್ಷದ ಗುರಿಯೊಂದಿಗೆ ಇಲಾಖೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಉದ್ದೇಶ ಹೊಂದಿದ್ದೇನೆ ಎಂದರು.
ಎಸ್ಟಿ ಮೀಸಲಾತಿ ವಿಚಾರ
ಎಸ್ಟಿ ಮೀಸಲಾತಿ ಹೆಚ್ಚಳ ಬಗ್ಗೆ ಶ್ರೀಗಳ ಜೊತೆ ಮಾತಾಡಿದ್ದೇನೆ. ಶೇ.7.5 ಮೀಸಲಾತಿ ನೀಡುವ ಬಗ್ಗೆ ವಾಲ್ಮೀಕಿ ಶ್ರೀಗಳ ನೇತೃತ್ವದಲ್ಲಿ ಒತ್ತಾಯ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಶೀಘ್ರ ಅಂತಿಮ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದರು.
ನಯಾಪೈಸೆ ಬ್ರಷ್ಟಾಚಾರ ನಡೆದಿಲ್ಲ
ಆರೋಗ್ಯ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬ್ರಷ್ಟಾಚಾರ ಬಗ್ಗೆ ಕೇಲಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯಲ್ಲಿ ನಾನು ನಯಾಪೈಸೆ ಬ್ರಷ್ಟಾಚಾರ ಮಾಡಿಲ್ಲ. ಸೋಶಿಯಲ್ ಆಡಿಟ್ ನಡೆದಿದ್ದು ಇದರಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದರು.
ಈ ಭಾಗದ ಪದವಿಧರರ ಕ್ಷೇತ್ರಕ್ಕೆ ಬಿಜೆಪಿ ಅಬ್ಯರ್ಥಿಯಾಗಿ ಎಸ್.ವಿ.ಸಂಕನೂರ್ ಅವರು ಸ್ಪರ್ಧಿಸಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಸಂಕನೂರ್ ಅವರಿಗೆ ಮತ ನೀಡಬೇಕು ಎಂದರು.
ಸಂಸದ ಶಿವಕುಮಾರ್ ಉದಾಸಿ ಮಾತನಾಡಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪಶ್ಚಿಮ ಪದವಿಧರ ಕ್ಷೇತ್ರ ವ್ಯಾಪ್ತಿಯಲ್ಲಿ 19 ಶಾಸಕರು, 4 ಸಂಸದರಿದ್ದಾರೆ. ಹೀಗಾಗಿ ಈಬಾರಿ ಕಳೆದ ಬಾರಿಗಿಂತ ಹೆಚ್ಚು ಮತಗಳಿಂದ ಬಿಜೆಪಿ ಅಬ್ಯರ್ಥಿ ಗೆಲವು ಸಾಧಿಸಲಿದ್ದಾರೆ. ಪದವಿಧರರಿಗಾಗಿ ಸಂಕನೂರ್ ಅವರು ಸದನದ ಒಳಗೆ ಹಾಗೂ ಹೊರಗೆ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಈ ಕಾರಣದಿಂದ ಒಬ್ಬ ಸೂಕ್ಷ್ಮ ಮತೀಯ ಅಬ್ಯರ್ಥಿ ಸಂಕನೂರ್ ಅವರಿಗೆ ಪದವಿಧರರು ಮತ ನೀಡುವ ಮೂಲಕ ಪುನ: ಆಯ್ಕೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಎಮ್.ಎಸ್.ಕರೀಗೌಡ್ರ, ಎಂ.ಎಂ.ಹಿರೇಮಠ, ರಾಜು ಕುರಡಗಿ, ಎಸ್.ಎಚ್. ಶಿವನಗೌಡ್ರ ಸೇರಿದಂತೆ ಇತರರು ಇದ್ದರು.